ಅಜ್ಜಂಪುರ: ‘ಭದ್ರಾ ಮೇಲ್ದಂಡೆಯ ಹನಿ ನೀರಾವರಿ ಯೋಜನೆ ಬಹು ಆರ್ಥಿಕ ವ್ಯವಸ್ಥೆಗೆ ಪೂರಕವಾಗಲಿದೆ. ರೈತರ ಪ್ರಗತಿಯ ದಾರಿಗೂ ಭದ್ರ ಬುನಾದಿಯಾಗಲಿದೆ’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ನಿವೃತ್ತ ಮುಖ್ಯ ಎಂಜಿನಿಯರ್ ಚೆಲುವರಾಜು ವಿಶ್ವಾಸ ವ್ಯಕ್ತಪಡಿಸಿದರು.
ತರೀಕೆರೆ ಏತ ಯೋಜನೆ-2 ರ ಅಡಿಯಲ್ಲಿ ಪಟ್ಟಣದ ಬುಕ್ಕಾಂಬುಧಿ ರಸ್ತೆಯ ವಿಶ್ವೇಶ್ವರಯ್ಯ ಜಲ ನಿಗಮದ ರೈತ ತರಬೇತಿ ಕೇಂದ್ರದಲ್ಲಿ ಗುರುವಾರ ನಡೆದ ‘ರೈತರಿಗೆ ತರಬೇತಿ ಮತ್ತು ಯಶಸ್ವಿ ರೈತರಿಗೆ ಸನ್ಮಾನ ಕಾರ್ಯಕ್ರಮ’ ದಲ್ಲಿ ಅವರು ಮಾತನಾಡಿದರು.
ಯೋಜನೆ ಬೆಳೆಗಷ್ಟೇ ಸೀಮಿತ ವಾಗಿಲ್ಲ. ಆರ್ಥಿಕ ಅಭಿವೃದ್ಧಿಗೂ ಕಾರಣ ಆಗಲಿದೆ. ಉತ್ತಮ ಬೆಳೆಯಿಂದ ಮಾರುಕಟ್ಟೆ ಅಭಿವೃದ್ಧಿ, ಸಾರಿಗೆ ವ್ಯವಸ್ಥೆ ಬಲಗೊಳ್ಳುತ್ತದೆ. ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತದೆ. ಆರ್ಥಿಕ ಸಬಲತೆ ಆಗುತ್ತದೆ. ಇದು, ಸಾಕಾರಗೊಳ್ಳಲು ಪೂರಕ ಮುಂದಾಲೋಚನೆ, ದೂರದೃಷ್ಟಿ ಕಾರ್ಯಪ್ರವೃತ್ತತೆ ಸೃಷ್ಟಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ನೆಟಾಫಿಮ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ಎಂ.ಸಿ.ಉಮೇಶ್, ಪೂರ್ಣಗೊಂಡಿರುವ ಪೈಪ್ ಲೈನ್ ಗಳಿಗೆ ತಮ್ಮಲ್ಲಿರುವ ಕೊಳವೆ ಬಾವಿ ನೀರನ್ನೇ ಹರಿಸಿ, ಉತ್ತಮ ಬೆಳೆ ಬೆಳೆದಿದ್ದೀರಿ. ಆದಾಯ ಗಳಿಸಿದ್ದೀರಿ. ಪ್ರಗತಿಪರ ರೈತರಾಗಿ ಹೊರಹೊಮ್ಮಿದ್ದೀರಿ. ಇತರ ಜಿಲ್ಲೆಯವರಿಗೆ ಮಾರ್ಗದರ್ಶಕರಾಗಿದ್ದೀರಿ. ಇದು ಯೋಜನೆಗೆ ಧನಾತ್ಮಕ ಚಿಹ್ನೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ಜಲ ನಿಗಮದ ಅಧೀಕ್ಷಕ ಎಂಜಿನಿಯರ್ ಎಫ್.ಎಚ್. ಲಮಾಣಿ, ಯೋಜನೆ ಮೂಲಕ 13,594 ಹೆಕ್ಟೇರ್ನಲ್ಲಿ ಹನಿ ನೀರಾವರಿ ಅನುಷ್ಠಾನಗೊಳಿಸಲಾಗುತ್ತಿದೆ. ತೆಂಗು-ಅಡಿಕೆ ತೋಟದಲ್ಲಿ ಪೈಪ್ ಲೈನ್ ಅಳವಡಿಕೆ ಹಾಗೂ ಪಂಪ್ ಹೌಸ್ ಘಟಕಗಳಿಗೆ ವಿದ್ಯುತ್ ಪೂರೈಕೆ ಬಾಕಿಯಿದೆ ಎಂದರು.
ನೆಟಾಫಿಮ್ ಇಂಡಿಯಾ ಮುಖ್ಯಕಾರ್ಯ ನಿರ್ವಹಣಾಧಿಕಾರಿ ವಿಕಾಸ್ ಸೋನಾವಾನೆ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶಮಂತ್ ಮಾತನಾಡಿದರು.
ಮೆಗಾ ಕಂಪನಿಯ ಯೋಜನಾ ನಿರ್ದೇಶಕ ಶ್ರೀಧರ್, ಬಿ.ಎಂ.ಸುರೇಶ್, ಮಹೇಶ್ವರಪ್ಪ, ಸಿದ್ದೇಶ್, ಕೃಷಿ ಅಧಿಕಾರಿ ಶಿವಕುಮಾರ್ ಇದ್ದರು. ರೈತ ಲೋಕೇಶಪ್ಪ, ಜಯಪ್ಪ, ಕಾಂತ ರಾಜು, ಮಂಜುನಾಥ್, ಉಮಾಶಂಕರ್ ಅವರನ್ನು ಸನ್ಮಾನಿಸಲಾಯಿತು.