ರಾಷ್ಟ್ರೀಯ ಉದ್ಯಾನದ ಚೆಕ್ಪೋಸ್ಟ್ ದಾಟಿ ಕುದುರೆಮುಖದಿಂದ ಎಸ್.ಕೆ.ಬಾರ್ಡರ್ ಕಡೆಗೆ ಪ್ರಯಾಣಿಸುವಾಗ ಪ್ರಕೃತಿಯ ವಿಶಿಷ್ಟ ಕೊಡುಗೆಗಳ ದರ್ಶನ ಆಗುತ್ತದೆ. ಉದ್ಯಾನದ ಹೃದಯಭಾಗ ಸೀಳಿಕೊಂಡು ಹೋಗುವ ಹೆದ್ದಾರಿಯ ಎರಡೂ ಬದಿ ಹುಲ್ಲುಗಾವಲು, ಜಲಪಾತ, ಶೋಲಾ ಅರಣ್ಯ, ನಿತ್ಯಹರಿದ್ವರ್ಣ ಕಾಡು ಈ ಬೇಸಿಗೆಯಲ್ಲೂ ಜೀವಂತಿಕೆಯ ಲಕ್ಷಣಗಳನ್ನು ತೋರ್ಪಡಿಸುತ್ತವೆ. ಜಲಪಾತದಲ್ಲಿ ಈಗಲೂ ನೀರು ಇದೆ. ಹಸಿರಿಗೆ ಏನೂ ಕೊರತೆ ಇಲ್ಲದಂತೆ ಉದ್ಯಾನದ ದೃಶ್ಯಗಳು ಕಣ್ಣಿಗೆ ಮುದ ನೀಡುತ್ತವೆ. ಬೇಸಿಗೆಯ ಕಾವು ಮರೆಸುತ್ತವೆ.