ಮೂಡಿಗೆರೆ: ಕಾರ್ಮಿಕರು ಸಂಘಟಿತರಾಗಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಸರ್.ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ಅಶೋಕ್ ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಸರ್.ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಸ್ಥಳೀಯ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರು ಅಸಂಘಟಿತರಾಗಿರುವುದರಿಂದ ಸರ್ಕಾರದ ಯೋಜನೆಗಳ ಅಡಿಯಲ್ಲಿ ಸವಲತ್ತು ಪಡೆದುಕೊಳ್ಳಲು ವಿಫಲರಾಗುತ್ತಿದ್ದಾರೆ. ಎಲ್ಲ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕೆಲಸದ ಜಾಗಗಳಲ್ಲಿ ಅಪಘಾತ ಸಂಭವಿಸಿದರೆ ನಷ್ಟ ಪರಿಹಾರ ಪಡೆಯುವ ಸಲುವಾಗಿ ಗುಂಪು ವಿಮೆ ಮಾಡಿಸಿಕೊಳ್ಳಬೇಕು. ಅನಾರೋಗ್ಯದ ವೇಳೆ ಕಟ್ಟಡ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಸರ್ಕಾರವು ಕಾರ್ಮಿಕ ಇಲಾಖೆ ಮೂಲಕ ಅಪಘಾತ ಪರಿಹಾರ, ಅನಾರೋಗ್ಯ ಕಾರ್ಮಿಕರಿಗೆ ನೆರವು, ಪಿಂಚಣಿ ಸೌಲಭ್ಯಗಳನ್ನು ಜಾರಿಗೊಳಿಸಿದ್ದು, ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣ ಮಾತನಾಡಿ, ‘ಕಟ್ಟಡ ಕಾರ್ಮಿಕರು ಮೊದಲು ಸಂಘಟಿತರಾಗಬೇಕು. ಕಾರ್ಮಿಕರು ಜೀವನಪೂರ್ತಿ ದುಡಿದರೂ ಸಾಯುವವರೆಗೂ ನೆಮ್ಮದಿಯಿಲ್ಲದ ಸ್ಥಿತಿಯಿದೆ. ಕಾರ್ಮಿಕರು ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಜೀವಿಸಲು ಪಿಂಚಣಿ ಯೋಜನೆಗಳನ್ನು ಬಳಸಿಕೊಳ್ಳಬೇಕು. ಮಕ್ಕಳ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಸರ್ಕಾರದಿಂದ ನೆರವು ನೀಡಲಾಗುತ್ತಿದ್ದು, ಕಾರ್ಮಿಕರಲ್ಲಿ ಅರಿವಿಲ್ಲದೆ ಕಾರಣ ಶೇ 70ರಷ್ಟು ಮಂದಿ ಇದುವರೆಗೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರಿರುವ ಸ್ಥಳಕ್ಕೆ ತೆರಳಿ ನೋಂದಣಿ ಮಾಡಿಸಬೇಕು’ ಎಂದರು.
ನೂತನ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹೆಸ್ಗಲ್ ಗ್ರಾಮ ಪಂಚಾಯಿತಿ ಸದಸ್ಯೆ ನಂದಾಮೂರ್ತಿ, ಸಂಘದ ಪದಾಧಿಕಾರಿಗಳಾದ ಶಿವು, ಭಾನುಮತಿ, ಪರಮೇಶ್, ಪುರುಷೋತ್ತಮ, ಗಣೇಶ್ ಇದ್ದರು.