ಜಾತ್ರಾ ಮಹೋತ್ಸವದ ಅಂಗವಾಗಿ ಲಕ್ಷ್ಮೀರಂಗನಾಥ ಸ್ವಾಮಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ಸವ ಮೂರ್ತಿಯನ್ನು ಡೊಳ್ಳು, ವೀರಗಾಸೆ, ಮಂಗಳವಾಧ್ಯ, ಕಹಳೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಮಾವು, ಕದಳಿ, ವಿವಿಧ ವರ್ಣದ ಬಟ್ಟೆಯಿಂದ ಶೃಂಗಾರಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಗ್ರಾಮ ಮತ್ತು ಸುತ್ತಮುತ್ತಲ ಸಾವಿರಾರು ಭಕ್ತರು ರಥ ಎಳೆದರು. ಕೆಲವರು ರಥದ ಕಳಸದತ್ತ, ಪುರಿ, ನಿಂಬೆ ಹಣ್ಣು, ಬಾಳೆ ಹಣ್ಣು ತೂರಿ ಸಂಭ್ರಮಿಸಿದರು. ಜೈಕಾರ ಹಾಕಿ, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಹೂ-ಹಣ್ಣು ನೀಡಿ, ಭಕ್ತಿ ಸಮರ್ಪಿಸಿದರು.