ಕಡೂರು; ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಕೆರೆಗೆ ಹಾಕಿದ್ದ ಆರೋಪಿಯನ್ನು 24 ಗಂಟೆಯೊಳಗೆ ಯಗಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಬ್ಯಾಗಡೇಹಳ್ಳಿ ಮೂಲದ ಮಂಜುಳಾ ( 40) ಹತ್ಯೆಯಾದ ಮಹಿಳೆ. ಈಕೆಯ ಜೊತೆ ಸಂಬಂಧವಿಟ್ಟುಕೊಂಡಿದ್ದ ಚಿಕ್ಕಬಾಸೂರಿನ ತಮ್ಮಯ್ಯ ಎಂಬಾತ ಆಕೆಯೊಡನೆ ಜಗಳವಾಡಿ ಉಸಿರುಗಟ್ಟಿಸಿ ಹತ್ಯೆ ಮಾಡಿ, ನಂತರ ಆಕೆಯ ದೇಹವನ್ನು ಬಿಳುವಾಲದ ಕೆರೆಯಲ್ಲಿ ಮುಳುಗಿಸಿದ್ದ.
ಮಹಿಳೆ ಕಾಣೆಯಾದ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ಜ.21ರಂದು ದೂರು ದಾಖಲಾಗಿತ್ತು. ಜ.27ರಂದು ಬಿಳುವಾಲ ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿ ತಮ್ಮಯ್ಯನನ್ನು ಮತ್ತು ಕೃತ್ಯಕ್ಕೆ ಸಹಕಾರ ನೀಡಿದ ಮಂಜುನಾಥ ಎಂಬುವವರನ್ನು ಪತ್ತೆ ಮಾಡಿ ಸೋಮವಾರ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಇನ್ಸ್ಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಯಗಟಿ ಪಿಎಸ್ಐ ರಂಗನಾಥ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.