ನರಸಿಂಹರಾಜಪುರ: ರಾಷ್ಟ್ರಪ್ರೇಮ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಮನೆಯ ಮೇಲೂ ಧ್ವಜ ಹಾರಿಸುವ (ಹರ್ ಘರ್ ತಿರಂಗಾ) ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ತಿಳಿಸಿದರು.
ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಬಿಜೆಪಿ ತಾಲ್ಲೂಕು ಘಟಕದ ವತಿಯಿಂದ ಬಿ.ಎಚ್.ಕೈಮರದಿಂದ ಪಟ್ಟಣದ ಪ್ರವಾಸಿ ಮಂದಿರದವರೆಗೆ ಆಯೋಜಿಸಿದ್ದ ತಿರಂಗಾ ಬೈಕ್ ರ್ಯಾಲಿಯ ವೇಳೆ ಅವರು ಮಾತನಾಡಿದರು.
ಮನೆಗಳ ಮೇಲೆ ರಾಷ್ಟ್ರಧ್ವಜ ಹಾರುತ್ತಿದ್ದರೆ ಸದಾ ಶಾಂತಿ ಮೂಡಿರುತ್ತದೆ. ಶನಿವಾರದಿಂದ ಸೋಮವಾರದವರೆಗೆ ರಾಷ್ಟ್ರಧ್ವಜಕ್ಕೆ ಯಾವುದೇ ರೀತಿ ಅಗೌರವವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಖಾದಿ ಧ್ವಜ ನೀಡುವ ಬದಲು ಪಾಲಿಸ್ಟರ್ ಬಟ್ಟೆಯ ಧ್ವಜವನ್ನು ನೀಡಿದ್ದಾರೆ ಮತ್ತು ಅದನ್ನು ಹಣಕ್ಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ದೇಶದ 50 ಕೋಟಿ ಮನೆಗಳಿಗೆ ಖಾದಿ ಧ್ವಜವನ್ನು ಪೂರೈಸಲು ಸಾಧ್ಯವಾಗದ್ದರಿಂದ ಪಾಲಿಸ್ಟರ್ ಧ್ವಜ ನೀಡಲಾಗಿದೆ. ದುಡಿಮೆಯ ಹಣದಿಂದ ಖರೀದಿಸಿದ ಧ್ವಜಕ್ಕೆ ಮಹತ್ವ ಇರುತ್ತದೆ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಅರುಣ್ ಕುಮಾರ್, ಮುಖಂಡರಾದ ಪಿ.ಜೆ.ಅಂಟೋಣಿ, ಬಿ.ಎಸ್.ಆಶೀಶ್ ಕುಮಾರ್, ನಿಲೇಶ್, ಅಶ್ವಿನ್, ಶ್ರೀನಾಥ್, ಫರ್ವಿಜ್, ಪ್ರಸಾದ್, ಲೋಕೇಶ್, ಎನ್.ಎಂ.ಕಾಂತರಾಜ್, ವೈ.ಎಸ್.ರವಿ, ಅರುಣ್ ಕುಮಾರ್ ಜೈನ್, ಕೆವೆ ಮಂಜುನಾಥ್ ಇದ್ದರು.
ಬೈಕ್ ಜಾಥಾದ ನಂತರ ಬಿಜೆಪಿ ಕಾರ್ಯಕರ್ತರು ನೀರಿನ ಟ್ಯಾಂಕ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ದೇಶಭಕ್ತಿಯ ಘೋಷಣೆ ಕೂಗಿದರು.