ಆಲ್ದೂರು: ದತ್ತಮಾಲಾ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಶ್ರೀರಾಮ ಸೇನೆ ಆಲ್ದೂರು ಘಟಕದ ವತಿಯಿಂದ ಶೋಭಾ ಯಾತ್ರೆ ಭಾನುವಾರ ನಡೆಯಿತು.
ಅಮೃತೇಶ್ವರ ದೇವಸ್ಥಾನದಲ್ಲಿ ಮಾಲಾರ್ಥಿಗಳು ಸಂಗ್ರಹಿಸಿದ ಪಡಿ ಧಾನ್ಯಗಳನ್ನು ಬಳಸಿ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಪಾಲ್ಗೊಂಡರು. ನಂತರ ಪಟ್ಟಣದ ಮುಖ್ಯಬೀದಿಗಳಲ್ಲಿ ತಾಳಮೇಳ ವಾದ್ಯಗಳೊಂದಿಗೆ ಶೋಭಾ ಯಾತ್ರೆ ಸಾಗಿತು. ಸಾರ್ವಜನಿಕರು ರಥದೊಂದಿಗೆ ಹೆಜ್ಜೆ ಹಾಕಿದರು.
ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಮಹೇಶ್ ಕುಮಾರ್ ಕಟ್ಟಿನಮನೆ, ‘ಧರ್ಮ ಜಾಗೃತಿಗಾಗಿ ಶೋಭಾಯಾತ್ರೆ ನಡೆಸಲಾಗುತ್ತಿದೆ. 26 ವರ್ಷಗಳಿಂದ ದತ್ತಾತ್ರೇಯ ಪೀಠದ ಹೋರಾಟ ನಡೆಯುತ್ತಿದೆ. ಪುಣ್ಯ ಧಾರ್ಮಿಕ ಕ್ಷೇತ್ರವು ರಾಜಕೀಯಕ್ಕೆ ಬಳಕೆಯಾಗಿ ಬಲಿಯಾಗುತ್ತಿದೆ’ ಎಂದು ಹೇಳಿದರು.
ಮೂಡಿಗೆರೆ ತಾಲ್ಲೂಕಿನ ಅಧ್ಯಕ್ಷ ಅಜಯ್ ಮಾತನಾಡಿ, ‘ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರ ಸೋಗಿನಲ್ಲಿ ನುಸುಳುಕೋರರು ದೇಶದ ಒಳಹೊಕ್ಕು ಮುಂದೊಂದು ದಿನ ಅಶಾಂತಿಯನ್ನು ಸೃಷ್ಟಿಸಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಸಾಧ್ಯತೆ ಇದ್ದು, ಎಲ್ಲರೂ ಎಚ್ಚೆತ್ತುಕೊಂಡು ಸರ್ಕಾರಕ್ಕೆ ಎಚ್ಚರಿಸಬೇಕು’ ಎಂದರು.
ವಿಭಾಗ ಅಧ್ಯಕ್ಷ ಸತೀಶ್ ಪೂಜಾರಿ, ಹೋಬಳಿ ಅಧ್ಯಕ್ಷ ರಾಜೇಶ್, ಸೋಮಶೇಖರ್, ಆಲ್ದೂರು ಘಟಕದ ಉಪಾಧ್ಯಕ್ಷ ಶರತ್, ಪ್ರಧಾನ ಕಾರ್ಯದರ್ಶಿ ಸಚಿನ್, ಭರತ್, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಇದ್ದರು. ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ್, ಪಿಎಸ್ಐ ಸಜಿತ್ ಕುಮಾರ್ ಹಾಗೂ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.