ಕಳಸ: ಕಳಸ-ಕೊಟ್ಟಿಗೆಹಾರ ರಾಜ್ಯ ಹೆದ್ದಾರಿಯ ಕಲ್ಮಕ್ಕಿ ಮತ್ತು ಕಳಸ-ಮಾಗುಂಡಿ ಹೆದ್ದಾರಿಯ ಕಗ್ಗನಳ್ಳದಲ್ಲಿ ರಸ್ತೆ ಬದಿ ಕಂದಕಗಳು ಸೃಷ್ಟಿಯಾಗಿವೆ.
ಕಲ್ಮಕ್ಕಿಯ ತಿರುವಿನಲ್ಲಿ 4 ಅಡಿ ಆಳಕ್ಕೆ ಮೂಡಿರುವ ಕಂದಕ ಪಾದಚಾರಿಗಳು ಮತ್ತು ದಿಚಕ್ರ ವಾಹನಗಳಿಗೆ ತುಂಬಾ ಅಪಾಯಕಾರಿಯಾಗಿದೆ. ಸ್ಥಳೀಯರು ಕಲ್ಮಕ್ಕಿಯ ಕಂದಕದ ಬಳಿ ನೆರೆದು ಈ ಅಪಾಯದ ಬಗ್ಗೆ ಇಲಾಖೆಯ ಗಮನ ಸೆಳೆಯುವ ಪ್ರಯತ್ನ ಮಾಡಿದರು.
‘ಈ ಮೋರಿ ನಿರ್ಮಾಣವಾದಾಗಲೇ ಕಳಪೆ ಕಾಮಗಾರಿಯ ಬಗ್ಗೆ ದೂರಿದ್ದೆವು. ಆಗಲೇ ಮೋರಿ ಕುಸಿಯುವ ಸೂಚನೆ ಇತ್ತು, ಈಗ ಕುಸಿದಿದೆ. ಲೋಕೋಪಯೋಗಿ ಇಲಾಖೆಯು ಎಲ್ಲಡೆ ಕಳಪೆ ಕಾಮಗಾರಿಯಿಂದ ಜನರ ಹಣ ಲೂಟಿ ಹೊಡೆಯುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ರಿಜ್ವಾನ್ ದೂರಿದರು.
‘ಕಗ್ಗನಳ್ಳ ಸಮೀಪದ ಹೆದ್ದಾರಿಯ ಕಂದಕ ಮಳೆಗಾಲಕ್ಕೂ ಮುನ್ನವೇ ಆಗಿತ್ತು. ಆ ಕಂದಕದ ಮೂಲಕ ಭದ್ರಾ ನದಿಯ ಪ್ರವಾಹ ಹೆದ್ದಾರಿಗೂ ನುಗ್ಗುತ್ತಿದೆ. ಇದರಿಂದ ಕಗ್ಗನಳ್ಳದ ಸಮುದಾಯ ಭವನದ ಸುತ್ತಲೂ ಕಳೆದ ವಾರ ನೀರು ತುಂಬಿತ್ತು’ ಎಂದು ಬಾಳೆಹೊಳೆಯ ಸತೀಶ್ ಅಸಮಾಧಾನ ಹೊರಹಾಕಿದರು.