ಚಿಕ್ಕಮಗಳೂರು: ತಾಲ್ಲೂಕಿನ ಸೀತಾಳಯ್ಯನ ಗಿರಿಯಲ್ಲಿ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಮತ್ತು ಮುಳ್ಳಪ್ಪ ಸ್ವಾಮಿ ಅಡ್ಡ ಪಲ್ಲಕ್ಕಿ ಉತ್ಸವ ಮಂಗಳವಾರ ಜರುಗಿತು.
ದೇಗುಲದಲ್ಲಿ ಸ್ವಾಮಿಗೆ ನಸುಕಿನಿಂದಲೇ ವಿವಿಧ ಕೈಂಕರ್ಯಗಳನ್ನು ನೆರವೇರಿಸಲಾಯಿತು. ವಿಶೇಷ ಅಲಂಕಾರ, ಅಭಿಷೇಕಗಳು ನಡೆದವು.
ಬೆಳಿಗ್ಗೆಯಿಂದಲೇ ಭಕ್ತರು ದೇಗುಲದಲ್ಲಿ ಪೂಜೆ ಸಲ್ಲಿಸಿ, ಮಲ್ಲಿಕಾರ್ಜುನ ಸ್ವಾಮಿ ದರ್ಶನ ಮಾಡಿ ಪುನೀತ ಭಾವ ಮೆರೆದರು. ತೀರ್ಥ, ಪ್ರಸಾದ ಸ್ವೀಕರಿಸಿದರು.
ಮುಳ್ಳಪ್ಪ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಿತು. ಸೀತಾಳ ಮಲ್ಲಿಕಾರ್ಜುನ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ದೊಡ್ಡ ತೇರನ್ನು ಎಳೆದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದರು. ತೇರಿಗೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಬುಧವಾರ ಓಕುಳಿ ನಡೆಯಲಿದ್ದು, ಇದರೊಂದಿಗೆ ಮಹೋತ್ಸವ ಸಂಪನ್ನವಾಗಲಿದೆ ಎಂದು ಭಕ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಗಿರಿ ಶ್ರೇಣಿಯ ಸುತ್ತಲಿನ ಗ್ರಾಮಸ್ಥರು, ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಪಾಲ್ಗೊಂಡಿದ್ದರು. ಅಂತರ ಪಾಲನೆ ‘ಮಾಯ’ವಾಗಿತ್ತು. ರಥೋತ್ಸವದ ವೈಭವವನ್ನು ಹಲವು ಭಕ್ತರು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರು. ರಥೋತ್ಸವ ನಿಮಿತ್ತ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.