ಶೃಂಗೇರಿ: `ನೇರಳಕೊಡಿಗೆಯಲ್ಲಿ ಗಣೇಶ್ ಹೆಗ್ಡೆ ಮನೆಯ ಹಿಂದೆ ಭಾರಿ ಮಳೆಗೆ ಭೂಕುಸಿತ ಉಂಟಾದ ಜಾಗದಲ್ಲಿ ಮತ್ತು ನೇರಳಕೊಡಿಗೆಯಲ್ಲಿ ಭಾರಿ ಪ್ರಮಾಣದ ರಸ್ತೆ ಕುಸಿತಗೊಂಡ ಜಾಗದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಕೇಂದ್ರದ ವಿಪತ್ತು ನಿರ್ವಾಹಣಾ ಪಡೆ ಡಿ.1 ರಂದು ಬೆಳಿಗ್ಗೆ 9.30ಕ್ಕೆ ಅಣಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ' ಎಂದು ಉಪವಿಭಾಗಾಧಿಕಾರಿ ರಾಜೇಶ್ ಹೇಳಿದರು.
ಇಲ್ಲಿ ನಡೆದ ಗುಡ್ಡ ಕುಸಿತದ ಅಣಕು ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ವಿಪತ್ತು ಸಂಭವಿಸಿದಾಗ ಅಧಿಕಾರಿಗಳು ಮತ್ತು ಸಾರ್ವಜನಿಕರು ಸ್ಪಂದಿಸಿದರೆ ವಿಪತ್ತು ನಿರ್ವಾಹಣಾ ಪಡೆಯವರು ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆದರಿಂದ ಈ ಅಣಕು ಪ್ರದರ್ಶನದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬೇಕು’ ಎಂದರು.
ವಿಪತ್ತು ನಿರ್ವಾಹಣಾ ಪಡೆಯ ಇನ್ಸ್ಪೆಕ್ಟರ್ ಅಜಯ್ ಕುಮಾರ್, ಸಬ್ ಇನ್ಸ್ಪೆಕ್ಟರ್, ದೇವರಾಜ್, ತಹಶೀಲ್ದಾರ್ ಗೌರಮ್ಮ, ಜಿಲ್ಲಾಡಳಿತ ಕಚೇರಿಯ ದೀಕ್ಷಿತ್ ಮತ್ತು ಅಧಿಕಾರಿಗಳು ಇದ್ದರು.