ಚಿಕ್ಕಮಗಳೂರು: ಜಿಲ್ಲೆಯ 210 ಸರ್ಕಾರಿ ಶಾಲೆಗಳಲ್ಲಿ ‘ಸ್ಮಾರ್ಟ್ ಕ್ಲಾಸ್’ ವ್ಯವಸ್ಥೆ ಇದೆ. ಇನ್ನು 600 ಶಾಲೆಗಳಲ್ಲಿ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.
ಕೆನರಾ ಬ್ಯಾಂಕ್, ಮೆಂಡಾ ಫೌಂಡೇಶನ್, ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆ ನೆರವಿನಲ್ಲಿ ಸೆಲ್ಕೊ ಸೋಲಾರ್ ಸಂಸ್ಥೆ, ಜಿಲ್ಲಾ ಪಂಚಾಯಿತಿ ವತಿಯಿಂದ ವಸ್ತಾರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಿರುವ ಸೌರಶಕ್ತಿ ಆಧಾರಿತ ಡಿಜಿಟಲ್ ಎಜ್ಯುಕೇಷನ್ ಪ್ರೋಗ್ರಾಮ್ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಕೆಗೆ ಕ್ರಮ ವಹಿಸಲಾಗಿದೆ. ಸ್ಮಾರ್ಟ್ ಕ್ಲಾಸ್ ಸೌಕರ್ಯ ಕಲ್ಪಿಸಲು ₹ 1.8 ಲಕ್ಷ ವೆಚ್ಚವಾಗುತ್ತದೆ. ಕೆನರಾ ಬ್ಯಾಂಕ್, ಸಹಿತ ವಿವಿಧ ಸಂಸ್ಥೆಗಳು ನೆರವು ನೀಡುತ್ತಿವೆ ಎಂದರು.
ಜಿಲ್ಲೆಯ ಶಾಲೆಗಳಲ್ಲಿ ಅನುಭವಾತ್ಮಕ ಕಲಿಕೆ ಅನುಷ್ಠಾನಗೊಳಿಸಲಾಗಿದೆ. ಮಕ್ಕಳು ಕೇಳಿ ತಿಳಿಯುವದಕ್ಕಿಂತಲೂ ನೋಡಿ ಕಲಿಯುವುದರಿಂದ ಸುಲಲಿತವಾಗಿ ಗ್ರಹಿಸಲು ಅನುಕೂಲವಾಗುತ್ತದೆ ಎಂದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಮಾತನಾಡಿ, ಪ್ರಸಕ್ತ ವರ್ಷ 10 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಸ್ಥಾಪನೆಗೆ ನೆರವು ನೀಡಲಾಗುವುದು ಎಂದರು.
ಸೆಲ್ಕೊ ಸಂಸ್ಥೆ ಮುಖ್ಯ ವ್ಯವಸ್ಥಾಪಕ ಪಾರ್ಥಸಾರಥಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಮರ್ಥ್ಯ ಇದ್ದರೂ ಅವಕಾಶಗಳ ಕೊರತೆಯಿಂದ ವಿದ್ಯಾಭ್ಯಾಸಕ್ಕೆ ತೊಡಕುಂಟಾಗುತ್ತಿದೆ. ಸ್ಮಾರ್ಟ್ ಕ್ಲಾಸ್ ಮೂಲಕ ತಂತ್ರಜ್ಞಾನದ ಅಳವಡಿಕೆ ಈ ಅವಕಾಶಗಳ ಅಂತರವನ್ನು ದೂರ ಮಾಡುವ ಪ್ರಯತ್ನ ಎಂದು ಹೇಳಿದರು.
ಡಿಡಿಪಿಐ ರಂಗನಾಥ ಸ್ವಾಮಿ, ವಸ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಇದ್ದರು.