ಶೃಂಗೇರಿ: ‘ಮಹಿಳೆಯರಿಗೆ ಆರ್ಥಿಕ ಬಲ ತುಂಬಲು ಮಹಿಳೆಯರು ಸಿದ್ಧಪಡಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಸಂಜೀವಿನಿ ಮಾಸಿಕ ಸಂತೆ ಆಯೋಜಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಜಯರಾಮ್ ಹೇಳಿದರು.
ತಾಲ್ಲೂಕಿನ ಮೆಣಸೆ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಮೆಣಸೆ ಸಂಜೀವಿನಿ ಒಕ್ಕೂಟದ ‘ಸಂಜೀವಿನಿ ಸಂತೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆಯರು ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದಾರೆ. ಮಹಿಳೆಯರ ಯೋಚನಾಲಹರಿ ಸಕಾರಾತ್ಮಕವಾದಾಗ ಆಕೆ ಸಮಾಜದ ಅನೇಕ ಮಜಲುಗಳನ್ನು ದೃಢತೆಯಿಂದ ಮೆಟ್ಟಿನಿಲ್ಲಲು ಸಾಧ್ಯ’ ಎಂದರು.
ಸಂಜೀವಿನಿಯ ಕಾರ್ಯಕ್ರಮ ವ್ಯವಸ್ಥಾಪಕ ಆದರ್ಶ ಮಾತನಾಡಿ, ‘ಮಹಿಳೆಯರಿಗೆ ಅವರ ವಯಸ್ಸಿಗೆ ತಕ್ಕಂತೆ ಜವಾಬ್ದಾರಿ ಇರಬೇಕು. ಅವರು ತಮ್ಮ ಸ್ವಸಾಮರ್ಥ್ಯದಿಂದ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ’ ಎಂದರು.
ಸ್ತ್ರೀ ಶಕ್ತಿ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಸಿದ್ಧಪಡಿಸಿದ ವಸ್ತುವನ್ನುಸಂತೆಯಲ್ಲಿ ಪ್ರದರ್ಶಿಸಿ ಮಾರಾಟ ಮಾಡಿದರು.
ಮೆಣಸೆ ಗ್ರಾಮ ಪಂಚಾಯಿತಿ ಸದಸ್ಯ ತ್ರಿಮೂರ್ತಿ, ಸಂಧ್ಯಾ ಮರಿಯಪ್ಪಗೌಡ, ಸುಷ್ಮಾ ಸುರೇಂದ್ರಚಾರ್ಯ, ಎಸ್ಡಿಎಂಸಿ ಅಧ್ಯಕ್ಷ ಉದಯ, ಸಂಜೀವಿನಿ ಒಕ್ಕೂಟ ಸಂಸ್ಥೆಯ ವಲಯ ಮೇಲ್ವಿಚಾರಕ ಅಮೃತ, ಚೈತ್ರಾ, ಪವಿತ್ರಾ, ದಿವ್ಯಾ ಇದ್ದರು.