ಕಡೂರು: ದೇಶವನ್ನು ಬಲಪಡಿಸಲು ಮಹಿಳಾ ಶಕ್ತಿ ಬಹುಮುಖ್ಯವಾದುದು ಎಂದು ಶಾಸಕ ಬೆಳ್ಳಿಪ್ರಕಾಶ್ ಅಭಿಪ್ರಾಯಪಟ್ಟರು.
ಇಲ್ಲಿನ ಶಾಸಕರ ಕಚೇರಿಯಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಸ್ತ್ರೀಶಕ್ತಿ ಸಂಘಗಳಿಗೆ ಸಹಾಯಧನ ವಿತರಸಿ ಅವರು ಮಾತನಾಡಿದರು.
‘ದೇಶ ಯಾವ ದಿಕ್ಕಿನಲ್ಲಿ ಸಾಗಬೇಕು, ಎಂತಹ ಚಿಂತನೆಯುಳ್ಳ ನಾಯಕರು ದೇಶದ ನೇತಾರರಾಗಬೇಕೆಂಬುದನ್ನು ನಿರ್ಧರಿಸಲು ಮಹಿಳೆಯರು ಅರಿವು ಮೂಡಿಸಿಕೊಳ್ಳಬೇಕು. ಮಹಿಳೆ ಸ್ವಾವಲಂಬಿಯಾಗಬೇಕೆಂಬ ಉದ್ದೇಶದಿಂದ ಸ್ತ್ರೀಶಕ್ತಿ ಸಂಘಗಳಿಗೆ ಸಹಾಯಧನ ನೀಡುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು’ ಎಂದರು.
ಸಿಡಿಪಿಒ ಆಶಾ ಮಾಹಿತಿ ನೀಡಿ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸ್ತ್ರೀಶಕ್ತಿ ಗುಂಪುಗಳಿಗೆ ಮಹಿಳಾ ಸಬಲೀಕರಣಕ್ಕೆಂದು ₹ 75 ಕೋಟಿ ಕೇಂದ್ರ ಸರ್ಕಾರ ನೀಡಿದೆ. ನೀಡಿದ್ದರು. ಅದರಲ್ಲಿ ಕಡೂರು ತಾಲ್ಲೂಕಿಗೆ ₹ 34 ಲಕ್ಷ ಮಂಜೂರಾಗಿದ್ದು, ಆ ಪೈಕಿ 34 ಸಂಘಗಳಿಗೆ ತಲಾ ₹ 1 ಲಕ್ಷ ಮೊತ್ತವನ್ನು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು785 ಸಂಘಗಳಿವೆ. 15 ಸಾವಿರ ಸದಸ್ಯರಿದ್ದು ₹ 12 ಕೋಟಿ ಉಳಿತಾಯ ಮಾಡಿದ್ದಾರೆ. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಈ ಸಹಾಯಧನ ಮಹತ್ವದ ಹೆಜ್ಜೆಯಾಗಿದೆ’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಾ ನಾಯ್ಕ, ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಎ.ಇ.ರತ್ನಾ, ಸಿಡಿಪಿಒ ಕಚೇರಿಯ ಹೇಮಾವತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.