ನರಸಿಂಹರಾಜಪುರ: ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಹಲವು ತಿಂಗಳು ಕಳೆದರೂ ತಾಲ್ಲೂಕು ಕೇಂದ್ರದಲ್ಲಿ ಇದುವರೆಗೂ ಶಾಸಕರ ಕಚೇರಿ ಉದ್ಘಾಟನೆಗೊಂಡಿಲ್ಲ. ಜನಸಾಮಾನ್ಯರ ಕೈಗೆ ಶಾಸಕರು ಸಿಗುತ್ತಿಲ್ಲ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಪಟ್ಟಣದ ತಾಲ್ಲೂಕು ಕಚೇರಿಯ ವ್ಯಾಪ್ತಿಯಲ್ಲಿ ಶಾಸಕರ ಕಚೇರಿ ಈ ಹಿಂದೆ ಇತ್ತು. ಈಗ ಇಲ್ಲದ ಕಾರಣ, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು 60 ಕಿ.ಮೀ ದೂರವಿರುವ ಶಾಸಕರ ಮನೆಗೆ ಅಥವಾ ಕೊಪ್ಪಕ್ಕೆ ಹೋಗುವ ಸ್ಥಿತಿ ಇದೆ.
‘ಶಾಸಕರು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ. ಜನರ ಸಮಸ್ಯೆಯನ್ನೂ ಆಲಿಸಿಲ್ಲ. ಶಾಸಕರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ. ನೇರ ಭೇಟಿ ಮಾಡಲು ಕೆಲವು ಮುಖಂಡರ ಮೊರೆ ಹೋಗುವ ಸ್ಥಿತಿಯಿದೆ’ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದರು.
‘ಪಟ್ಟಣದ ವ್ಯಾಪ್ತಿಯಲ್ಲಿ 158 ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡಲು ಫಲಾನುಭವಿಗಳ ಆಯ್ಕೆ ನಡೆದು ಎರಡು ವರ್ಷಗಳು ಸಂದರೂ ಇದುವರೆಗೂ ನಿವೇಶನ ನೀಡಲು ಯಾವುದೇ ಕ್ರಮ ಕೈಗೊಂಡಿಲ್ಲ. 2018ರಿಂದ ಬಾಳೆಕೊಪ್ಪದ ಬಾಗಿಲು ಮುಚ್ಚಿರುವ ಸರ್ಕಾರಿ ಶಾಲೆಯ ಜಾಗದಲ್ಲಿ ಟೆಂಟ್ ನಲ್ಲಿ ವಾಸವಾಗಿರುವ ಅಲೆ ಮಾರಿ ಜನಾಂಗದವರಿಗೆ ಅರಳಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ನಿವೇಶನ ಮಂಜೂರಾಗಿದ್ದರೂ ಇದುವರೆಗೂ ನಿವೇಶನ ಹಂಚಲು ಕ್ರಮ ಕೈಗೊಂಡಿಲ್ಲ’ ಎಂಬ ಆರೋಪ ಕೇಳಿಬಂದಿದೆ.
ಈ ಹಿಂದೆ ಹಲವು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸಿಲುಕಿ ಬೇರೆಡೆಗೆ ವರ್ಗವಾಣೆ ಗೊಂಡಿದ್ದ ಅಧಿಕಾರಿಗಳನ್ನು ಪುನಃ ತಾಲ್ಲೂಕಿನ ಪ್ರಮುಖ ಇಲಾಖೆಗೆ ವರ್ಗಾವಣೆ ಮಾಡಿಸಿದ್ದಾರೆ ಎಂಬ ದೂರು ಕೇಳಿಬಂದಿದೆ.
ಹಿಂದೆ ಡಿ.ಎನ್.ಜೀವರಾಜ್ ಅವರು ಶಾಸಕರಾಗಿದ್ದಾಗ ಪ್ರತಿ ಶನಿವಾರ ಶಾಸಕರ ಕಚೇರಿಯಲ್ಲಿ ಲಭ್ಯವಾಗುತ್ತಿದ್ದರು. ಆದರೆ ಹಾಲಿ ಶಾಸಕರು ಕಳೆದ ಬಾರಿ ಕಚೇರಿ ತೆರೆದರೂ ಕಚೇರಿಯಲ್ಲಿ ಲಭ್ಯವಾಗಿರುವುದು ಅಪರೂಪ. ಪ್ರಸ್ತುತ ಕಚೇರಿಯನ್ನು ತೆರೆದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.