ಕಡೂರು: ತಾಲ್ಲೂಕಿನ ಮಚ್ಚೇರಿಯ ಐತಿಹಾಸಿಕ ಸೌಮ್ಯ ಯೋಗಾನರಸಿಂಹ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ಮುಂಜಾನೆ ಮೂಲ ನರಸಿಂಹಸ್ವಾಮಿ, ಶ್ರೀನಿವಾಸ ಹಾಗೂ ರಾಮಾನುಜರ ಮೂರ್ತಿಗೆ ವಿಶೇಷ ಪಂಚಾಮೃತ ಅಭಿಷೇಕ ನಡೆಸಲಾಯಿತು. ಆನಂತರ ಉತ್ಸವ ಶ್ರೀನಿವಾಸ ದೇವರನ್ನು ವೈಕುಂಠ ದ್ವಾರದ ಮೇಲೆ ಪ್ರತಿಷ್ಟಾಪಿಸಲಾಯಿತು.
ಸೌಮ್ಯ ಯೋಗಾನರಸಿಂಹ ದೇವರಿಗೆ ಸುವರ್ಣ ನೇತ್ರಾಲಂಕಾರ ಮಾಡಲಾಗಿತ್ತು. ಸಾಮೂಹಿಕ ವಿಷ್ಣು ಸಹಸ್ರ ನಾಮ ಪಠಣ, ಶಾತ್ತುಮೊರೈ ಸೇವೆ ನೆರವೇರಿತು. ಸಂಜೆ ಪುನಃ ಸಹಸ್ರನಾಮ, ಅಷ್ಟಾವಧಾನ, ಶಯನೋತ್ಸವ ನಡೆಯಿತು. ಪ್ರಧಾನ ಅರ್ಚಕ ಸುದರ್ಶನ ರಾಮಾನುಜ ಧಾರ್ಮಿಕ ವಿಧಿ ನೆರವೇರಿಸಿದರು.
ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಎಂ.ಕೆ.ತಿಮ್ಮಯ್ಯ, ಉಪಾಧ್ಯಕ್ಷ ಎಂ.ಕೆ.ಸತೀಶ್, ದೇವಸ್ಥಾನ ಸಂಸ್ಥಾಪಕರಾದ ಯತಿರಾಜ ರಾಮಾನುಜ, ಯೋಗಾನರಸಿಂಹ ಇದ್ದರು.
ವೈಕುಂಠ ಏಕಾದಶಿ ಪ್ರಯುಕ್ತ ಮಚ್ಚೇರಿಯ ಸೌಮ್ಯ ಯೋಗಾನರಸಿಂಹ ಸ್ವಾಮಿಗೆ ಸುವರ್ಣ ನೇತ್ರಾಲಂಕಾರ
ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿಯೂ ವೈಕುಂಠ ಏಕಾದಶಿ ಸಂಭ್ರಮದಿಂದ ನಡೆಯಿತು. ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸನನ್ನು ಸ್ಥಾಪಿಸಲಾಗಿದ್ದ ವೈಕುಂಠ ದ್ವಾರವನ್ನು ಹಾದು ನೂರಾರು ಭಕ್ತರು ಶ್ರೀನಿವಾಸನ ದರ್ಶನ ಪಡೆದರು.