ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ ಮಹಾಸತಿ ಗುಡಿ ಸಂಶೋಧನೆ

ವಿಜಯನಗರ ಕಾಲದ ಅಪರೂಪದ ಗುಡಿ
Last Updated 9 ಜುಲೈ 2020, 9:00 IST
ಅಕ್ಷರ ಗಾತ್ರ

ಕಳಸ: ಭದ್ರಾ ನದಿ ದಡದ ಪಂಚತೀರ್ಥಗಳಲ್ಲೊಂದಾದ ವಶಿಷ್ಟತೀರ್ಥದ ಬಳಿ ಮಲೆನಾಡಿನಲ್ಲಿ ವಿಜಯನಗರ ಕಾಲದ ಅಪರೂಪವಾದ ‘ವೀರಮಹಾಸತಿ ಗುಡಿ’ಯನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಂಶೋಧನೆ ಮಾಡಿದ್ದಾರೆ.

‘ಕಳಸದ ಅರಣ್ಯ ಇಲಾಖೆಯ ನರ್ಸರಿ ಪಕ್ಕದಲ್ಲಿ ನಾಲ್ಕೂಅಡಿ ಎತ್ತರದ ಕಣಶಿಲೆಯ ಕಲ್ಲಿನಲ್ಲಿ ವೀರ- ಮಹಾಸತಿ ಶಿಲ್ಪವಿದೆ. ವೀರ ಮಹಾಸತಿಯರ ಕುತ್ತಿಗೆಯವರೆಗೆ ಹುತ್ತವು ಮುಚ್ಚಿಕೊಂಡಿದೆ. ಈ ಶಿಲಾ ಸ್ಮಾರಕ ಎರಡು ಫಲಕ ಹೊಂದಿದ್ದು, ಕೆಳಗಿನ ಫಲಕದಲ್ಲಿ ವೀರನಶಿಲ್ಪ ಖಡ್ಗಧಾರಿಯಾಗಿದ್ದು ಅವನು ಧರಿಸಿದ ಶಿರೋಭೂಷಣ, ಕಿವಿಯಲ್ಲಿ ಧರಿಸಿದ ಕರ್ಣಕುಂಡಲ ಆಕರ್ಷಕವಾಗಿವೆ. ಬಲಭಾಗದ ಆತನ ಪತ್ನಿ ವೀರಮಹಾಸತಿ ಶಿಲ್ಪ ಆಕರ್ಷಕ ಕೇಶಾಲಂಕಾರ, ಕರ್ಣಕುಂಡಲ ಧರಿಸಿದ್ದು ಮೇಲೆತ್ತಿದ ಎರಡೂ ಕೈಗಳಲ್ಲಿ ಕನ್ನಡಿ ಹಾಗೂ ನಿಂಬೆ ಹಣ್ಣು ಹಿಡಿದಂತಿದೆ’ ಎಂದು ಎಚ್.ಆರ್.ಪಾಂಡುರಂಗ ಹೇಳಿದ್ದಾರೆ.

‘ಸ್ಮಾರಕದ ಮೇಲಿನ ಫಲಕದಲ್ಲಿ ಎಡಭಾಗದಲ್ಲಿ ಶಿವಲಿಂಗದ ಮುಂದೆ ಮಂಡಿಯೂರಿ ಕುಳಿತ ಶಿವನ ವಾಹನ ಸರ್ವಾಲಂಕೃತ ನಂದಿ, ಶಿವಲಿಂಗ, ಘಂಟಾ ನಾದ ಮಾಡುತ್ತಾ ದೀಪಾರತಿ ಮಾಡುತ್ತಿರುವ ಅರ್ಚಕರು ಹಾಗೂ ಅವರ ಪಕ್ಕದಲ್ಲಿ ದೀಪದ ಕಂಭವಿದ್ದು, ಶಿವಲಿಂಗದ ಮೇಲೆ ಎಡಭಾಗದಲ್ಲಿ ಸೂರ್ಯ, ಬಲಭಾಗದಲ್ಲಿ ಚಂದ್ರನ ಚಿತ್ರಣಗಳಿವೆ. ಅಂದರೆ ವೀರ-ಮಹಾಸತಿ ಇಬ್ಬರೂ ಕೈಲಾಸ ವಾಸಿಗಳಾಗಿದ್ದಾರೆ ಎಂದು ಅರ್ಥೈಸಬಹುದು’ ಎಂದು ಹೇಳಿದ್ದಾರೆ.

‘ಈ ಸ್ಮಾರಕದ ವೀರ- ಮಹಾಸತಿಯರ ಶಿರೋಭೂಷಣ- ಕೇಶಾಲಂಕಾರ ಅವರು ನಿಂತ ನಿಲುವು ಗಮನಿಸಿದರೆ ಈ ಶಿಲ್ಪದಲ್ಲಿನ ವೀರ ಕಳಸ ನಾಡಿನ ಸೈನ್ಯಾಧಿಪತಿಯೋ, ರಾಜಕುಟುಂಬದ ಸದಸ್ಯನೋ ಆಗಿದ್ದು ಯಾವುದೋ ಯುದ್ಧದಲ್ಲಿ ವೀರ ಮರಣಹೊಂದಿದ್ದು, ಅವನೊಂದಿಗೆ ಅವನ ಮಡದಿ ಸಹಗಮನ ಮಾಡಿದ್ದು ಅವರ ಸ್ಮರಣಾರ್ಥ ಅವರಿಬ್ಬರ ಸ್ಮಾರಕಶಿಲ್ಪ ಪ್ರತಿಷ್ಠಾಪಿಸಿ ಶಿಲಾಮಂಟಪ ಕಟ್ಟಿಸಿ ನಿತ್ಯ ಪೂಜೆ ಮಾಡುತ್ತಿದ್ದರು ಎನ್ನಬಹುದಾಗಿದೆ. ಕಾಲಮಾನದ ದೃಷ್ಟಿಯಿಂದ ಗಮನಿಸಿದರೆ ಈ ವೀರ ಮಹಾಸತಿ ಶಿಲ್ಪ ಹದಿನಾಲ್ಕನೇ ಶತಮಾನದ ಭೈರವರಸರ ಆಡಳಿತದ ಶಿಲ್ಪವಾಗಿದ್ದು, ವಿಜಯನಗರ ಸಾಮ್ರಾಜ್ಯದ ಆರಂಭ ಕಾಲಕ್ಕೆ ಸೇರಿರಬಹುದು ಎಂದು ಊಹಿಸಬಹುದಾಗಿದೆ’ ಎಂದು ತಿಳಿಸಿದ್ದಾರೆ.

ಈ ವೀರಮಹಾಸತಿ ಶಿಲ್ಪವನ್ನು ‘ಮಾಸ್ತಿಯಮ್ಮ’ ಎಂದೂ ಈ ಸ್ಥಳವನ್ನು ‘ಮಾಸ್ತಿಕಟ್ಟೆ’ ಎಂದು ಸ್ಥಳೀಯರು ಇಂದಿಗೂ ಕರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT