ಕಡೂರು: ತರಕಾರಿ ಬೆಲೆ ಮತ್ತೆ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಆದರೆ, ಬೆಲೆ ಏರಿಕೆ ಲಾಭ ವ್ಯಾಪಾರಿಗಳಿಗೆ ಮಾತ್ರ ಸಿಗುತ್ತಿದೆಯೇ ಹೊರತು ರೈತರಿಗೆ ವರ್ಗಾವಣೆ ಆಗುತ್ತಿಲ್ಲ.
ಯಾವುದೇ ತರಕಾರಿಯ ಬೆಲೆ ಕೇಳಿದರೂ ಹೌಹಾರುವ ಸರದಿ ಗ್ರಾಹಕರದ್ದು. ಒಂದು ಕೆ.ಜಿ. ತರಕಾರಿ ಖರೀದಿಸುತ್ತಿದ್ದವರು ಈಗ ಕಾಲು ಕೆ.ಜಿ ಸಾಕೆನ್ನುತ್ತಿದ್ದಾರೆ. ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದರೂ, ತರಕಾರಿ ಬೆಲೆ ಇಳಿದಿಲ್ಲ. ಅದಕ್ಕೂ ಮುನ್ನ ಮಳೆಯಿಲ್ಲದೆ ರೈತರು ಹೆಚ್ಚು ತರಕಾರಿ ಬೆಳೆದಿರಲಿಲ್ಲ. ಹಾಗಾಗಿ ಸದ್ಯ ಮಾರುಕಟ್ಟೆಗೆ ತರಕಾರಿ ಆವಕ ಕಡಿಮೆ ಇದೆ. ಸ್ಥಳೀಯ ವ್ಯಾಪಾರಿಗಳು ಚಿಕ್ಕಮಗಳೂರು, ಭದ್ರಾವತಿ ಮೊದಲಾದ ಊರುಗಳಿಂದ ತರಕಾರಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ.