ಚಿಕ್ಕಮಗಳೂರು: ಕಾಡಾನೆಯೊಂದು ಚಿಕ್ಕಮಗಳೂರು ನಗರದ ಒಳಭಾಗಕ್ಕೆ ಬಂದು ಜಯನಗರದ ಬೀದಿಗಳಲ್ಲಿ ಸುತ್ತಾಡುವ ಮೂಲಕ ಆತಂಕ ಸೃಷ್ಟಿಸಿತು.
ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುತ್ತಿದ್ದ ಜನರಿಗೆ ಆನೆ ಎದುರಾಗಿದೆ. ಕೂಡಲೇ ಎಲ್ಲರೂ ಮನೆ ಸೇರಿಕೊಂಡು ಆನೆ ಓಡಾಡುವ ವಿಡಿಯೊ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆಗೂ ಸುದ್ದಿ ಮುಟ್ಟಿಸಿದ್ದಾರೆ.
ಜಯನಗರದಿಂದ ಮತ್ತೆ ತೇಗೂರು ಕಡೆಗೆ ಹೋದ ಆನೆ ಈಗ ಕದ್ರಿಮಿದ್ರಿ ಅರಣ್ಯದಲ್ಲಿ ಸೇರಿದೆ. 10–12 ವರ್ಷದ ಮರಿಯಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
‘ಆನೆಗಳ ಹಿಂಡಿನಲ್ಲಿದ್ದ ಮರಿಯಾನೆ ತಪ್ಪಿಸಿಕೊಂಡು ಊರಿನತ್ತ ಬಂದಿದೆ. ಸದ್ಯ ಸುರಕ್ಷಿತ ಜಾಗದಲ್ಲಿದ್ದು, ರಾತ್ರಿ ಬಳಿಕ ಹಿಂಡಿನತ್ತ ಓಡಿಸಲಾಗುವುದು. ಜನ ಆತಂಕಗೊಳ್ಳುವುದು ಬೇಡ’ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ತಿಳಿಸಿದರು.