ಆಲ್ದೂರು: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಟದ ಮೈದಾನದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಹಲವು ತಿಂಗಳುಗಳ ಹಿಂದೆ ಕಾಮಗಾರಿ ಆರಂಭವಾಗಿತ್ತು. ಇದುವರೆಗೂ ಪೂರ್ಣಗೊಂಡಿಲ್ಲ.
ಕಾಮಗಾರಿ ಅಪೂರ್ಣವಾಗಿರುವುದು ಯಾಕೆ ಎನ್ನುವ ಕಾರಣ ತಿಳಿದಿಲ್ಲ. ಈ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಒಳ್ಳೆಯ ಆಟದ ಮೈದಾನ ಇಲ್ಲ. ಸ್ಥಳೀಯ ಮಟ್ಟದ ಕ್ರೀಡಾಕೂಟಗಳು ನಡೆದರೆ ಖಾಸಗಿ ಶಾಲೆಗಳ ಕ್ರೀಡಾಂಗಣಗಳನ್ನು ಅವಲಂಬಿಸಬೇಕಾಗಿದೆ.
‘ಇಲ್ಲಿ ಆಟದ ಮೈದಾನಕ್ಕೆ ಬೇಕಾಗುಷ್ಟು ಸ್ಥಳಾವಕಾಶ ಇದೆ. ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಜೀವನ ಕೆ, ನಾಗರಾಜ್ ಎಆರ್, ಅವಿನಾಶ್ ಆಚಾರ್ಯ ಒತ್ತಾಯಿಸಿದ್ದಾರೆ.
‘ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಆಟದ ಮೈದಾನದ ಕಾಮಗಾರಿಯನ್ನು ಸಂಬಂಧಪಟ್ಟ ಇಲಾಖೆಯವರು ಬೇಗ ಪೂರ್ಣಗೊಳಿಸಬೇಕು’ ಎಂದು ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎ.ಯು,ಇಬ್ರಾಹಿಂ ಒತ್ತಾಯಿಸಿದರು.
‘ಇಲ್ಲಿನ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ರಾಜ್ಯಮಟ್ಟ ಪ್ರತಿನಿಧಿಸಿದ್ದು, ಇನ್ನಷ್ಟು ಉನ್ನತ ಸಾಧನೆ ಮಾಡಲು, ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಇಲ್ಲಿ ಸಿಂಥೆಟಿಕ್ ಕಬಡ್ಡಿ ಅಂಕಣ ನಿರ್ಮಿಸಿಕೊಡಬೇಕು’ ಎಂದು ಕ್ರೀಡಾಪಟುಗಳಾದ ಸುದೀಪ್,ನಂದನ್, ಚೇತನ್ ಪವನ್ ಮನವಿ ಮಾಡಿದರು.
‘ಶೀಘ್ರವೇ ಕಾಮಗಾರಿ’
ಪ್ರಾಥಮಿಕ ಶಾಲೆಯ ಆಟದ ಮೈದಾನಕ್ಕೆ ನರೇಗಾದಡಿ ₹5 ಲಕ್ಷ ಹಾಗೂ ಪ್ರೌಢಶಾಲೆಯ ಆಟದ ಮೈದಾನಕ್ಕೆ ₹10 ಲಕ್ಷ ಅನುದಾನದಡಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಇಲ್ಲಿ ವಾಲಿಬಾಲ್ ಮತ್ತು ಥ್ರೋ ಬಾಲ್ ಕೋರ್ಟ್ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮಳೆಯ ಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು. ಪ್ರೌಢ ಶಾಲೆಯ ಆಟದ ಮೈದಾನಕ್ಕೆ ಜಲ್ಲಿ ಕಲ್ಲಿನ ನೆಲಹಾಸು ಹಾಕಲಾಗಿದ್ದು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ನರೇಗಾ ಯೋಜನೆಯ ತಾಂತ್ರಿಕ ಸಹಾಯಕ ಎಂಜಿನಿಯರ್ ಕಾರ್ತಿಕ್ ಹೇಳಿದರು
ಕಾಮಗಾರಿ ಪೂರ್ತಿಯಾಗದೆ ಉಳಿದಿರುವ ಪಟ್ಟಣದ ಸರ್ಕಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣ