ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗಳ ಮೊದಲಪಟ್ಟಿ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ನಿರೀಕ್ಷೆಯಂತೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಿ.ಟಿ.ರವಿ ಮತ್ತು ಶೃಂಗೇರಿ ಕ್ಷೇತ್ರದಲ್ಲಿ ಡಿ.ಎನ್.ಜೀವರಾಜ್ ಅವರನ್ನು ಘೋಷಿಸಲಾಗಿದೆ.
ಇವರಿಬ್ಬರು ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹೆಗ್ಗಳಿಕೆ ಹೊಂದಿದ್ದಾರೆ. ಈ ಕ್ಷೇತ್ರಗಳಲ್ಲಿ ಇವರಿಬ್ಬರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿತ್ತು. ಈ ಕ್ಷೇತ್ರಗಳಲ್ಲಿ ಟಿಕೆಟ್ಗೆ ಪೈಪೋಟಿಯೂ ಇರಲಿಲ್ಲ. ಇವರಿಬ್ಬರೂ ಕ್ಷೇತ್ರಗಳಲ್ಲಿ ಚುನಾವಣೆ ನಿಟ್ಟಿನಲ್ಲಿ ಭರದ ಸಿದ್ಧತೆ ಈಗಾಗಲೇ ಶುರು ಮಾಡಿದ್ದರು. ಸಿ.ಟಿ.ರವಿ ಅವರು ಗ್ರಾಮ ವಾಸ್ತವ್ಯ, ಪಾದಯಾತ್ರೆಗಳನ್ನು ಕೈಗೊಂಡು ಪ್ರಚಾರದಲ್ಲಿ ತೊಡಗಿದ್ದರು.
ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಈಗ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳಿಗೆ ಘೋಷಣೆಯಾಗಿದೆ. ತರೀಕೆರೆ, ಕಡೂರು ಮತ್ತು ಮೂಡಿಗೆರೆ (ಮೀಸಲು ಕ್ಷೇತ್ರ) ಈ ಮೂರೂ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚು ಇದ್ದಾರೆ.ಅಭ್ಯರ್ಥಿಗಳ ಆಯ್ಕೆ ನಿಟ್ಟಿನಲ್ಲಿ ಪಕ್ಷವು ಸಮೀಕ್ಷೆ, ಜನಾಭಿಪ್ರಾಯ ಸಂಗ್ರಹಿಸಿದೆ.
‘ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯು ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಬಂಡಾಯ ಬಿಸಿ ತಟ್ಟುವ ಸಾಧ್ಯತೆ ಇದೆ. ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿ ನಂತರ ಅಭ್ಯರ್ಥಿಗಳನ್ನು ಘೋಷಿಸಲು ವರಿಷ್ಠರು ನಿರ್ಧರಿಸಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.