ಧರ್ಮಪುರ: ನಿರ್ಜನ ಪ್ರದೇಶಗಳು ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಒಂಟಿ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಮಹಿಳೆಯರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ತಮ್ಮ ಕೆಲಸಗಳಲ್ಲಿ ತೊಡಗಬೇಕು ಎಂದು ಹೆಡ್ ಕಾನ್ಸ್ಟೆಬಲ್ ರೇಖಾ ತಿಳಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ಹಿರಿಯೂರು ಉಪ ವಿಭಾಗದ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಅಬ್ಬಿನಹೊಳೆ ಠಾಣೆ ನೇತೃತ್ವದಲ್ಲಿ ಇಲ್ಲಿನ ಪಂಚಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಆತ್ಮರಕ್ಷಣಾ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಯುವತಿಯರು, ಮಹಿಳೆಯರು ಮಾನಸಿಕವಾಗಿ ಖಿನ್ನರಾಗದೇ ಬಲಿಷ್ಠರಾಗಬೇಕು ನಿರಾಯುಧರಾಗಿದ್ದರೂ ಸಹ ತಮ್ಮ ಕೈ, ಮುಷ್ಠಿ, ತಲೆ ಪಾದಗಳನ್ನು ಆಯುಧಗಳಂತೆ ಬಳಸಿ ಆ ಕ್ಷಣದಲ್ಲಿ ಸಂಕಷ್ಟದಿಂದ ಪಾರಾಗಬೇಕು. ದೌರ್ಜನ್ಯಕ್ಕೆ ಒಳಗಾಗುವ ವೇಳೆ ‘ಪಂಚ್’ ಮಾಡಬೇಕು. ಕಿರುಚುವುದು ಕೂಡ ಒಂದು ತಂತ್ರ’ ಎಂದರು.
ಡಿವೈಎಸ್ಪಿ ವೆಂಕಟಪ್ಪ ನಾಯಕ ಅವರ ಮಾರ್ಗದರ್ಶನದಲ್ಲಿ ಮಹಿಳಾ ಸಿಬ್ಬಂದಿಗಳಾದ ನಳಿನಾ, ವಿಶಾಲಾಕ್ಷಿ, ಮಂಜುಳಾ, ಲತಾ, ಚೇತನಾ, ಹೆಡ್ಕಾನ್ಸ್ಟೆಬಲ್ ಈಶ್ವರನಾಯ್ಕ್, ಪ್ರದೀಪ್, ಕಾಲೇಜಿನ ಪ್ರಾಂಶುಪಾಲ ಕೆ. ಬೊಪ್ಪಣ್ಣ, ಆ.ದೋ.ಪಾಂಡು, ಎಂ.ಜಿ. ರಂಗಸ್ವಾಮಿ ಇದ್ದರು.