ಚಿತ್ರದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ಚುರುಕುಗೊಳಿಸಿ ಚಿತ್ರದುರ್ಗ ಹಾಗೂ ನಾಯಕನಹಟ್ಟಿ ಹೋಬಳಿಯ ಕೆರೆ ತುಂಬಿಸಬೇಕು ಎಂದು ಆಗ್ರಹಿಸಿ ನಾಯಕನಹಟ್ಟಿ ಹೋಬಳಿ ನೀರಾವರಿ ಹೋರಾಟ ಸಮಿತಿ ವತಿಯಿಂದ ಸೋಮವಾರ ದ್ವಿಚಕ್ರ ವಾಹನ ಜಾಥಾನಡೆಯಿತು.
ನಾಯಕನಹಟ್ಟಿಯಿಂದ ಹೊರಟ ಜಾಥಾ ಚಿತ್ರದುರ್ಗ ತಲುಪಿ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿತು. ಮುಖ್ಯ ಎಂಜಿನಿಯರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾ ಮೇಲ್ದಂಡೆ ಬಯಲುಸೀಮೆ ರೈತರ ಆಶಾಕಿರಣ. ಯೋಜನೆ ಅನುಷ್ಠಾನಗೊಂಡು ಒಂದೂವರೆ ದಶಕ ಸಮೀಪಿಸಿದರೂ ಜಿಲ್ಲೆಯ ರೈತರಿಗೆ ನೀರು ಸಿಗುತ್ತಿಲ್ಲ. ವಿ.ವಿ.ಸಾಗರಕ್ಕೆ ಭದ್ರಾ ನೀರು ಹರಿದು ಬಂದಿರುವುದರಿಂದ ರೈತರು ಸಂತಸಗೊಂಡಿದ್ದಾರೆ. ಇದೇ ರೀತಿ ನಾಲೆ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಿ ಶೀಘ್ರವೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ನಾಯಕನಹಟ್ಟಿ ಹೋಬಳಿಯ 20 ಕೆರೆಗಳಿಗೆ ನೀರು ತುಂಬಿಸಲು ಟೆಂಡರ್ ಕರೆಯಲಾಗಿದೆ. ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದಿದೆ. ಈ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ನಾಯಕನಹಟ್ಟಿಯ ದೊಡ್ಡಕೆರೆ, ಸಣ್ಣಕೆರೆಗೆ ಶೀಘ್ರವೇ ನೀರು ಹರಿದುಬರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ, ಉಪಾಧ್ಯಕ್ಷ ಮಹಂತೇಶ್, ಕಾರ್ಯಾಧ್ಯಕ್ಷ ಬೋರಸ್ವಾಮಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲರಾಜು, ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.