ಗ್ರಾಮದಲ್ಲಿ ಮೇ 19ರಿಂದ ಬೇಸಿಗೆ ಶಿಬಿರ ನಡೆಸಲಾಗಿತ್ತು. ಶಿಬಿರದಲ್ಲಿ ಗ್ರಾಮದ 8ರಿಂದ 13 ವರ್ಷದ 40 ಶಾಲಾ ಮಕ್ಕಳು ಭಾಗವಹಿಸಿದ್ದರು. ಗ್ರಂಥಾಲಯ ಮೇಲ್ವಿಚಾರಕ ಆಂಜಿನಪ್ಪ ಮಕ್ಕಳಿಗೆ ಪ್ರತಿ ನಿತ್ಯ ಪೇಪರ್ನಲ್ಲಿ ದೋಣಿ, ಚಿಟ್ಟೆ ಮಾಡುವ ತರಬೇತಿ ನೀಡಿಸರು. ಅಲ್ಲದೇ ಗ್ರಂಥಾಲಯದ ಆವರಣದಲ್ಲಿ ಗ್ರಾಮೀಣ ಕ್ರೀಡೆಗಳಾದ ಚಿನ್ನಿ ದಾಂಡು, ಕಬಡ್ಡಿ, ಕೊಕ್ಕೊ, ಚೆಸ್ ಆಡುವುದನ್ನು ಕಲಿಸಲಾಯಿತು. ಮಕ್ಕಳಿಂದಲೇ ಕಥೆ ಹೇಳಿಸುವುದು, ಪ್ರಜಾವಾಣಿ, ವಿಜಯವಾಣಿ, ವಿದ್ಯಾರ್ಥಿ ಮಿತ್ರ, ಸುಧಾ, ಮಯೂರ ಮೊದಲಾದ ಪತ್ರಿಕೆಗಳನ್ನು ಓದಿಸಲಾಯಿತು. ಗ್ರಂಥಾಲಯದಲ್ಲಿ ಸಿಗುವ ಕಥೆ, ಕಾದಂಬರಿ ಪುಸ್ತಕಗಳನ್ನು ಓದುವುದರಿಂದ ಆಗುವ ಅನುಕೂಲದ ಬಗ್ಗೆ ತಿಳಿಸಿಕೊಡಲಾಯಿತು. ಹೊರ ಸಂಚಾರಕ್ಕೆ ಕರೆದೊಯ್ದು ಪ್ರಕೃತಿಯ ಬಗ್ಗೆಯೂ ಮಾಹಿತಿ ನೀಡಲಾಯಿತು ಎಂದು ಅವರು ವಿವರಿಸಿದರು.