ನಗರದ ಖಾಸಗಿ ಫಾರ್ಮಸಿಯಲ್ಲಿ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದರು. ದರ್ಶನ್ ಪತ್ನಿ ಕುರಿತು ಜಾಲತಾಣದಲ್ಲಿ ಕೆಟ್ಟದಾಗಿ ಸಂದೇಶ ಹಾಕಿದ್ದ ಕಾರಣ ದರ್ಶನ್ ಹಾಗೂ ಅವರ ಅಭಿಮಾನಿಗಳು ಸಿಟ್ಟಾಗಿದ್ದರು.
ಹೆಚ್ಚಾಗಿ ಒಬ್ಬನೇ ಇರುತ್ತಿದ್ದ ರೇಣುಕಾಸ್ವಾಮಿಗೆ ಗುಟ್ಕಾ ಸೇವನೆಯ ಅಭ್ಯಾಸವಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಿದ್ದರು. ರೇಣುಕಾ ಸ್ವಾಮಿ ಮದುವೆಯಾಗಿ ಜೂನ್ 28ಕ್ಕೆ ಒಂದು ವರ್ಷವಾಗಿದ್ದು ಪತ್ನಿ ಐದು ತಿಂಗಳ ಗರ್ಭಿಣಿ.
ಜೂನ್ 8ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದರು. ತಾಯಿಯ ಜತೆ ಅಂದು ಮಧ್ಯಾಹ್ನ ಮಾತನಾಡಿದ್ದಾರೆ. 2.30 ಸಮಯದಲ್ಲಿ ಊಟಕ್ಕೆ ಬರುವಂತೆ ಕರೆದಿದ್ದಾರೆ. ಸ್ನೇಹಿತರ ಜತೆಗಿದ್ದೇನೆ ಎಂದು ಹೇಳಿದ್ದರು.
ಸೋಮವಾರ ಬೆಳಿಗ್ಗೆ ಪೊಲೀಸರು ಕುಟುಂಬದ ಸದಸ್ಯರಿಗೆ ಕರೆ ಮಾಡಿ ಕೊಲೆ ಮಾಹಿತಿ ನೀಡಿದ್ದಾರೆ. ತಂದೆ, ತಾಯಿ, ಪತ್ನಿ ಮಾಹಿತಿ ತಿಳಿದ ಕೂಡಲೇ ಬೆಂಗಳೂರಿಗೆ ತೆರಳಿದ್ದಾರೆ.
ದರ್ಶನ್ ಬಂಧನ ವಿಷಯ ತಿಳಿಯುತ್ತಿದ್ದಂತೆ ರೇಣುಕಾಸ್ವಾಮಿ ಸ್ನೇಹಿತರು, ಕುಟುಂಬ ಸದಸ್ಯರು ನಿವಾಸದತ್ತ ಭೇಟಿ ನೀಡುತ್ತಿದ್ದಾರೆ.
ರೇಣುಕಾಸ್ವಾಮಿ ವರ್ತನೆಯಿಂದ ಬೇಸತ್ತು ದರ್ಶನ್ ಅವರೇ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಾರೆ.