ಚಿತ್ರದುರ್ಗ: ಧನುರ್ಮಾಸ ಡಿ. 16ರಿಂದ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಇಂದಿನಿಂದ ಸಂಕ್ರಾಂತಿ ಹಬ್ಬದವರೆಗೂ ಒಂದು ತಿಂಗಳ ಕಾಲ ಕೋಟೆನಾಡಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಲಿದೆ.
ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ನಿಂದ ಇಲ್ಲಿನ ಮೆದೇಹಳ್ಳಿ ರಸ್ತೆಯ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಸ್ವಾಮಿಯ 19 ನೇ ವರ್ಷದ ಬ್ರಹ್ಮೋತ್ಸವ ಕಾರ್ಯಕ್ರಮವೂ 16 ರಿಂದ 21ರವರೆಗೂ ನಡೆಯಲಿದೆ. 19 ರಂದು ನೂರಾರು ಮಾಲಾಧಾರಿಗಳು, ಭಕ್ತರ ಸಮ್ಮುಖದಲ್ಲಿ ಪಡಿಪೂಜೆ, 23 ಕ್ಕೆ ಮಹಾ ಅನ್ನದಾನ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಶರಣ್ಕುಮಾರ್ ತಿಳಿಸಿದ್ದಾರೆ.
2019 ರ ಜನವರಿ 13 ರಂದು ಬೆಳಿಗ್ಗೆ 6.30 ಕ್ಕೆ ಅಯ್ಯಪ್ಪ ಸ್ವಾಮಿಯ ಆಭರಣ ಮೆರವಣಿಗೆ, 14 ರಂದು ಸಂಜೆ 6ಕ್ಕೆ ಸ್ವಾಮಿಯ ದೇಗುಲದ ಮುಂಭಾಗದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪುರಾತನ ಐತಿಹ್ಯ ಇರುವ ಮೇಲುದುರ್ಗದ ಹಿಡಂಭೇಶ್ವರ, ಸಂಪಿಗೆ ಸಿದ್ದೇಶ್ವರ, ಕಾಶಿ ವಿಶ್ವೇಶ್ವರ, ವಿಶೇಷ ಆಕರ್ಷಣೆಯುಳ್ಳ ಪಲ್ಗುಣೇಶ್ವರ, ಕರ್ವತೀಶ್ವರ, ಕೋಟೆ ರಸ್ತೆ ಮಾರ್ಗದ ಗಾರೆಬಾಗಿಲು ಈಶ್ವರ, ಉಜ್ಜಯಿನಿ ಮಠದ ರಸ್ತೆಯ ಉಮಾ ಮಹೇಶ್ವರ, ನಗರದ ಹೃದಯ ಭಾಗದ ನೀಲಕಂಠೇಶ್ವರ, ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ, ನಗರೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ ಸ್ವಾಮಿ ಸೇರಿ ವಿವಿಧ ಶಿವ ದೇಗುಲಗಳಲ್ಲಿ ಪೂಜೆಗಳು ನಡೆಯಲಿವೆ.
ರಕ್ಷಕ ದೇವತೆಗಳಿಗೂ ವಿಶೇಷ ಪೂಜೆ
ಚಿತ್ರದುರ್ಗದ ರಕ್ಷಕ ದೇವತೆಗಳೆಂದೇ ಖ್ಯಾತಿ ಗಳಿಸಿರುವ ದುರ್ಗದ ಅಧಿದೇವತೆ ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಬರಗೇರಮ್ಮ, ಕಣಿವೆ ಮಾರಮ್ಮ, ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಚೌಡೇಶ್ವರಿ ದೇವತೆ ದೇಗುಲಗಳಲ್ಲೂ ಧನುರ್ಮಾಸದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ನೆರವೇರಲಿದೆ.
ಕೆಳಗೋಟೆಯ ಅನ್ನಪೂರ್ಣೇಶ್ವರಿ, ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ, ಮಾರಿಕಾಂಬ ಸೇರಿ ವಿವಿಧ ದೇವಿ ದೇಗುಲಗಳಲ್ಲೂ ಪೂಜೆ ನಡೆಸಲು ದೇಗುಲದ ಆಡಳಿತ ಮತ್ತು ಭಕ್ತ ಮಂಡಳಿ ಈಗಾಗಲೇ ಪೂರ್ವ ಸಿದ್ಧತೆ ನಡೆಸಿದ್ದಾರೆ.
ಗಣಪತಿ, ಆಂಜನೇಯ ದೇಗುಲದಲ್ಲೂ ವಿಶೇಷ
ಮೇಲುದುರ್ಗದ ಬೆಟ್ಟದ ಗಣಪತಿ, ಮದಕರಿ ಮಹಾಗಣಪತಿ, ಪ್ರಸನ್ನ ಗಣಪತಿ, ಹೊಳಲ್ಕೆರೆ ರಸ್ತೆಯ ಸಂಕಷ್ಟಹರ ಗಣಪತಿ, ತಮಟಕಲ್ಲು ಆಂಜನೇಯ, ವೀರಾಂಜನೇಯ, ಕೋಟೆ ಆಂಜನೇಯ, ಬರಗೇರಿ ಆಂಜನೇಯ, ಕ್ರೀಡಾಂಗಣ ರಸ್ತೆಯ ಆಂಜನೇಯ ಸ್ವಾಮಿ ದೇಗುಲಗಳಲ್ಲೂ ವಿಶೇಷ ಪೂಜೆಗಳು ನಡೆಯಲಿದೆ.
ಜೆಸಿಆರ್ ಬಡಾವಣೆಯ ಗಣಪತಿ, ಆಂಜನೇಯ ಸ್ವಾಮಿ ದೇಗುಲದಲ್ಲೂ ಧನುರ್ಮಾಸದಲ್ಲಿ ನಿತ್ಯ ಬೆಳಿಗ್ಗೆ 6.25 ಕ್ಕೆ ಮಹಾಪೂಜೆ, ಮಹಾಮಂಗಳಾರತಿ ಜರುಗಲಿದೆ ಎಂದು ದೇಗುಲದ ಅರ್ಚಕ ನಾಗರಾಜ ಶಾಸ್ತ್ರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.