ಹಿರಿಯೂರು: ‘ನೇರ ತೆರಿಗೆ ಬಾಕಿ ಇರುವ ಆದಾಯ ತೆರಿಗೆ ಪಾವತಿದಾರರು ಡಿ. 31ರ ಒಳಗೆ ಇಲಾಖೆಯನ್ನು ಸಂಪರ್ಕಿಸಿ, ಲೆಕ್ಕ ಪರಿಶೋಧಕರ ಮೂಲಕ ಆನ್ಲೈನ್ನಲ್ಲಿ ನಮೂನೆ 1ರಿಂದ 5ರವರೆಗೆ ಭರ್ತಿಮಾಡಿ ವಿನಾಯಿತಿ ಪಡೆಯಬಹುದಾಗಿದೆ’ ಎಂದು ಆದಾಯ ತೆರಿಗೆ ಅಧಿಕಾರಿ ಶರಣ್ ಕುಮಾರ್ ತಿಳಿಸಿದರು.
ನಗರದ ರೋಟರಿ ಸಭಾ ಭವನದಲ್ಲಿ ಶುಕ್ರವಾರ ಆದಾಯ ತೆರಿಗೆ ಇಲಾಖೆಯಿಂದ ಹಮ್ಮಿಕೊಂಡಿದ್ದ ‘ವಿವಾದ್ ಸೆ ವಿಶ್ವಾಸ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನೇರ ತೆರಿಗೆ ಬಾಕಿ ಇರುವ ಮತ್ತು ನ್ಯಾಯಾಲಯದಲ್ಲಿ ಅಪೀಲು ಹಾಕಿರುವಂತಹ ಆದಾಯ ತೆರಿಗೆ ಪಾವತಿದಾರರಿಗೆ ವಿನಾಯಿತಿ ಕೊಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಇದರಿಂದ ಬಾಕಿ ಇರುವ ಆದಾಯ ತೆರಿಗೆ ಮೇಲಿನ ಬಡ್ಡಿ, ದಂಡ ಮತ್ತು ಜೈಲುವಾಸ ತಪ್ಪಿಸಿಕೊಳ್ಳಬಹುದಾಗಿದೆ’ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಎಚ್.ಎಸ್.ಸುಂದರರಾಜ್, ‘ಆದಾಯ ತೆರಿಗೆ ಪಾವತಿ, ಜಿಎಸ್ಟಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ರೋಟರಿ ಮಾಡುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ತೆರಿಗೆ ಪಾವತಿದಾರರು, ಲೆಕ್ಕ ಪರಿಶೋಧಕರು ಕಲಿಯಬೇಕಾದದ್ದು ಸಾಕಷ್ಟಿದೆ’ ಎಂದರು.
ಆದಾಯ ತೆರಿಗೆ ಇಲಾಖೆ ಪರಿವೀಕ್ಷಕ ಚಂದ್ರಶೇಖರ್, ಲೆಕ್ಕ ಪರಿಶೋಧಕರಾದ ಆರ್.ಶಿವಕುಮಾರ್, ತಿಪ್ಪೇಸ್ವಾಮಿ, ಪ್ರಸನ್ನ, ಆನಂದಶೆಟ್ಟಿ, ದೇವರಾಜಮೂರ್ತಿ, ಕಿರಣ್, ನಾಗಣ್ಣ, ಎಚ್.ಎಸ್.ಪ್ರಶಾಂತ್, ಎ.ರಾಘವೇಂದ್ರ, ಸಣ್ಣ ಭೀಮಣ್ಣ ಹಾಜರಿದ್ದರು.