ಚಳ್ಳಕೆರೆ: ತಾಲ್ಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ದ್ಯಾಮಲಾಂಬ, ಯಲ್ಲಮ್ಮದೇವಿ, ಮೈಲಾರಲಿಂಗೇಶ್ವರ, ನರಸಿಂಹಸ್ವಾಮಿ, ರಂಗನಾಥಸ್ವಾಮಿ ದೇವರುಗಳಿಗೆ ಗಂಗಾ ಪೂಜೆ ಜತೆಗೆ ಅಂಬಿನ ಆಚರಣೆ ವಿಜೃಂಭಣೆಯಿಂದ ಜರುಗಿತು.
ನಂತರ ಸಂಜೆ ಗೊರವರ ಕುಣಿತ, ಡೊಳ್ಳು, ತಮಟೆ, ಉರುಮೆ ಮುಂತಾದ ಜನಪದ ಕಲಾ ಮೇಳಗಳೊಂದಿಗೆ ಭಕ್ತರು, ಅಲಕೃತಗೊಂಡ ಆರಾಧ್ಯ ದೈವಗಳ ಉತ್ಸವ ಮೂರ್ತಿಯನ್ನು ಹೊತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮಂಗಳವಾರ ಮೈಲಾರಲಿಂಗೇಶ್ವರಸ್ವಾಮಿ ದೇವಾಸ್ಥಾನದ ಆವರಣದಲ್ಲಿ ಗೊರವರ ಕುಣಿತ ಹಾಗೂ (ದೋಣಿ) ಸೇವೆಯ ಆಚರಣೆ ಸಂಭ್ರಮದಿಂದ ಜರುಗಿತು.
ದೋಣಿ (ಹಣ್ಣಿನ) ಸೇವೆ: ತಣ್ಣೀರಿನಲ್ಲಿ ಸ್ನಾನ ಮಾಡಿ ನಡೆಮುಡಿಯಲ್ಲಿ ಬಂದ ಭಕ್ತರು ‘ಏಳುಕೋಟಿ ಮೈಲಾರಲಿಂಗ ಚಾಂಗಮಲೋ’ ಎಂಬ ಘೋಷಣೆ ಕೂಗುತ್ತ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ನಂತರ ಡಮರುಗ ಬಾರಿಸುತ್ತ ಭಕ್ತರು ದೋಣಿಯ ಸುತ್ತಲು ಹೆಜ್ಜೆ ಹಾಕುತ್ತ ಕುಣಿದರು.
ಕರಿಕಂಬಳಿ ಗದ್ದುಗೆ ಮೇಲೆ ತಾಮ್ರಗಳ ಪಾತ್ರೆಯಲ್ಲಿ ರಾಶಿ ಹಾಕಿದ್ದ ಸುಲಿದ ಬಾಳೆಹಣ್ಣು, ಹಾಲು, ಸಕ್ಕರೆ ಮತ್ತು ತುಪ್ಪವನ್ನು ದೋಣಿಗೆ ಹಾಕುವ ಮೂಲಕ ಭಕ್ತರು ಹರಕೆ ತೀರಿಸಿದರು.
ಚಿತ್ರದುರ್ಗ, ಮಾಳಪ್ಪನಹಟ್ಟಿ, ಹಿರೆಮಧುರೆ, ಗಂಜಿಗುಂಟೆ, ಗೊರ್ಲತು, ಕೂಡ್ಲಹಳ್ಳಿ, ಬುಡ್ರಕುಂಟೆ, ಬೇಡರಹಳ್ಳಿ, ಮಠದಹಟ್ಟಿ ವಿವಿಧ ಭಾಗದಿಂದ ಗೊರವ ಕಲಾವಿದರು ದೋಣಿ ಸೇವೆಯಲ್ಲಿ ಪಾಲ್ಗೊಂಡಿದ್ದರು.