ಚಿತ್ರದುರ್ಗ: ‘ರಾಜ–ಮಹಾರಾಜರ ಆಳ್ವಿಕೆಯಲ್ಲಿ ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿ ಎಲ್ಲದರಲ್ಲೂ ಶ್ರೀಮಂತವಾಗಿತ್ತು. ಆ ಗತವೈಭವ ಮರುಕಳಿಸಬೇಕು’ ಎಂದು ಕೋಟೆ ವಾಯು ವಿಹಾರಿಗಳ ಸಂಘದ ಅಧ್ಯಕ್ಷ ಆರ್. ಸತ್ಯಣ್ಣ ಹೇಳಿದರು.
ಕೋಟೆ ಆವರಣದಲ್ಲಿ ಕೋಟೆ ವಾಯುವಿಹಾರಿಗಳ ಸಂಘ ಹಾಗೂ ಮಹರ್ಷಿ ಯೋಗ ಶಿಕ್ಷಣ ಸಂಸ್ಥೆಯಿಂದ ಸೋಮವಾರ ನಡೆದ 66ನೇ ‘ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡ ಭಾಷೆ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದು, ಪ್ರಾಮುಖ್ಯತೆ ಪಡೆದುಕೊಂಡಿದೆ. ಐತಿಹಾಸಿಕ ಹಿನ್ನೆನಲೆಯೂ ಇದೆ. ಈ ಭಾಷೆ ಸರಳವಾಗಿದ್ದು, ಸುಲಭವಾಗಿ ಕಲಿಯಬಹುದಾಗಿದೆ. ಕಿವಿಗೆ ಇಂಪು ನೀಡುವ ಭಾಷೆಯೂ ಹೌದು. ಆದರೆ, ಜಾಗತೀಕರಣದ ಪ್ರಭಾವಕ್ಕೆ ಸಿಲುಕಿ ಇಲ್ಲಿಯ ಸಾಂಪ್ರದಾಯಿಕ ಕಲೆಗಳು ಕ್ಷೀಣಿಸುತ್ತಿದ್ದು, ಕನ್ನಡ ಭಾಷೆಗೆ ಪೆಟ್ಟು ಬೀಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಶ್ರೀನಿವಾಸ್, ‘ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಹೀಗಾಗಿ ಪ್ರಾದೇಶಿಕ ಭಾಷೆಗಳ ಮೇಲೆ ವ್ಯವಸ್ಥಿತವಾದ ಪಿತೂರಿ ನಡೆಯುತ್ತಲೇ ಇದೆ. ಆದ್ದರಿಂದ ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.
ನಗರಸಭೆ ನಾಮನಿರ್ದೇಶಿತ ಸದಸ್ಯರಾದ ರಮೇಶ್ ಆಚಾರ್, ತಿಮ್ಮಪ್ಪ, ಉಪನ್ಯಾಸಕ ಕೆಂಚವೀರಪ್ಪ, ಲೇಖಕಿ ದಯಾ ಪುತ್ತೂರ್ಕರ್, ನಿವೃತ್ತ ಡಿಡಿಪಿಐ ಬಿ.ಆರ್. ನಾಗರಾಜ್, ಮಡಿವಾಳ ಸಂಘದ ಜಿಲ್ಲಾ ಅಧ್ಯಕ್ಷ ರಾಮಜ್ಜ, ನಿವೃತ್ತ ಎಸ್.ಐ. ಮಲ್ಲಿಕಾರ್ಜುನಾಚಾರ್ ಇದ್ದರು.