ವಿ.ವಿ.ಸಾಗರ (ಚಿತ್ರದುರ್ಗ): ಭಯೋತ್ಪಾದಕರು ಕರ್ನಾಟಕವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಉಗ್ರ ಚಟುವಟಿಕೆ ಸಂಪೂರ್ಣ ನಿಗ್ರಹ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಉಗ್ರರ 18ಸ್ಲೀಪರ್ ಸೆಲ್ ಪತ್ತೆ ಮಾಡಿ ಹಲವರನ್ನು ಬಂಧಿಸಲಾಗಿದೆ. ಆದರೂ ಕೆಲವರು ಹೊರ ರಾಜ್ಯದಿಂದ ಬಂದು ದಾಳಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಸಫಲವಾಗುವುದಿಲ್ಲ' ಎಂದು ಹೇಳಿದರು.
'ದೇಶದ ರಕ್ಷಣೆ ದೃಷ್ಟಿಯಿಂದ ಉಗ್ರ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮಂಗಳೂರು ಸ್ಫೋಟದ ಆರೋಪಿಯನ್ನು 24 ಗಂಟೆಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಈ ಕೃತ್ಯದ ಹಿಂದೆ ಇರುವ ಉಗ್ರ ಸಂಘಟನೆ ಭೇದಿಸಲು ರಾಷ್ಟ್ರೀಯ ತನಿಖಾ ದಳ ಮುಂದಾಗಿದೆ'ಎಂದುಹೇಳಿದರು.