ಕಲಬುರ್ಗಿ: ಜೇವರ್ಗಿ ರಸ್ತೆಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ಲಾಕ್ಡೌನ್ ಸಡಿಲಿಕೆ ನಂತರ ವ್ಯಾಪಾರ– ವಹಿವಾಟು ಕಳೆಕುಂದಿದೆ.
ಸೂಪರ್ ಮಾರ್ಕೆಟ್, ಬೀದಿ ಬದಿ ವ್ಯಾಪಾರ ಆರಂಭವಾಗಿರುವುದರಿಂದ ಬಹಳಷ್ಟು ಜನರು ಅಲ್ಲಿಯೇ ತರಕಾರಿ, ಹಣ್ಣು ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ನಗರದಿಂದ ದೂರವಿರುವ ವಾಜಪೇಯಿ ಬಡಾವಣೆಯಲ್ಲಿರುವ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಬೆಳಿಗ್ಗೆ 6 ರಿಂದ 8.30ವರೆಗೂ ಇಲ್ಲಿ ಚಿಲ್ಲರೆ ವ್ಯಾಪಾರಕ್ಕೆ ಮತ್ತು ಸಂಜೆ 5ರಿಂದ ಬೆಳಿಗ್ಗೆ 8ವರೆಗೆ ಸಗಟು ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
‘ಲಾಕ್ಡೌನ್ ಸಡಿಲಿಕೆ ನಂತರ ಚಿಲ್ಲರೆ ತರಕಾರಿ ವ್ಯಾಪಾರಕ್ಕೆ ಹೆಚ್ಚು ಧಕ್ಕೆಯಾಗಿದೆ.ಇಲ್ಲಿಗೆ ಬರಲು ಆಟೊಗೆ ₹20 ರಿಂದ 30 ಖರ್ಚು ಮಾಡಬೇಕು. ಹೀಗಾಗಿ ಬಹಳಷ್ಟು ಜನರು ಈಗ ಇಲ್ಲಿಗೆ ಬರಲು ಹಿಂಜರಿಯುತ್ತಿದ್ದಾರೆ. ವಾಹನ ಸೌಲಭ್ಯವಿದ್ದವರು ಮಾತ್ರ ಈಗ ಬರುತ್ತಿದ್ದಾರೆ’ ಎಂದು ವ್ಯಾಪಾರಿ ಪ್ರವೀಣ ಹೇಳಿದರು.
‘ಲಾಕ್ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 9ರವೆರೆಗೂ ವ್ಯಾಪಾರ ನಡೆಯುತ್ತಿತ್ತು. 300ಕ್ಕೂ ಹೆಚ್ಚು ವ್ಯಾಪಾರಿಗಳು ಇಲ್ಲಿ ಬರುತ್ತಿದ್ದರು. ಗ್ರಾಹಕರ ಸಂಖ್ಯೆ ಇಳಿಮುಖವಾಗಿರುವುದರಿಂದ ಈಗ ಕೇವಲ ನೂರು ಜನ ವ್ಯಾಪಾರಿಗಳು ಮಾತ್ರ ಬರುತ್ತಿದ್ದಾರೆ. ಬೆಳಿಗ್ಗೆ 8 ಗಂಟೆಯಾಗುತ್ತಲೇ ವ್ಯಾಪಾರ ವಹಿವಾಟು ಮುಗಿದು ಹೋಗುತ್ತಿದೆ. ಆದರೆ ಸಗಟು ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ’ ಎನ್ನುತ್ತಾರೆ ಅವರು.
ಸ್ಯಾನಿಟೈಜರ್ ಇಲ್ಲ: ಜಿಲ್ಲಾ ಆಡಳಿತ ಇಲ್ಲಿ ಸೋಂಕು ನಿವಾರಕ ಸಿಂಪಡಣೆ ಟೆನಲ್ ಸ್ಥಾಪಿಸಿತ್ತು. ಎರಡು ದಿನಗಳಿಂದ ಅದೂ ಸ್ಥಗಿತಗೊಂಡಿದೆ. ಆದರೆ, ಭದ್ರತೆಗೆ ಪೊಲೀಸರು ಇದ್ದಾರೆ.