ಚಿತ್ರದುರ್ಗ: ವಿಧಾನಪರಿಷತ್ ಚುನಾವಣೆಯ ಚಿತ್ರದುರ್ಗ–ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಅವರಿಗೆ ಮತದಾನದ ಹಕ್ಕು ಪಡೆದಿರುವ ಗ್ರಾಮ ಪಂಚಾಯಿತಿ ಸದಸ್ಯರು ದೇಣಿಗೆ ನೀಡಿದರು.
ಇಲ್ಲಿನ ವಿ.ಪಿ. ಬಡಾವಣೆಯಲ್ಲಿರುವ ಅಭ್ಯರ್ಥಿ ಮನೆಗೆ ಸೋಮವಾರ ಭೇಟಿ ನೀಡಿದ ಹೊಳಲ್ಕೆರೆ ತಾಲ್ಲೂಕಿನ ಮದ್ದೇರು, ತಾಳ್ಯ ಹಾಗೂ ಚಿತ್ರದುರ್ಗ ತಾಲ್ಲೂಕಿನ ಸೊಂಡೆಕೊಳ ಗ್ರಾಮ ಪಂಚಾಯಿತಿ ಸದಸ್ಯರು ‘ಕವರ್’ ಹಸ್ತಾಂತರಿಸಿದರು. ದೇಣಿಗೆಯ ಮೊತ್ತವನ್ನು ಅಭ್ಯರ್ಥಿ ಬಹಿರಂಗಪಡಿಸಲು ನಿರಾಕರಿಸಿದರು.
‘ವಿಧಾನಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ‘ಕವರ್’ ಹಂಚಲಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಗ್ರಾಮ ಪಂಚಾಯಿತಿ ಸದಸ್ಯರೇ ನನಗೆ ‘ಕವರ್’ ನೀಡಿ ಆಶೀರ್ವದಿಸಿದ್ದಾರೆ. ಇದು ನಿಜಕ್ಕೂ ಹೊಸ ಬೆಳವಣಿಗೆ’ ಎಂದು ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಅಭಿಪ್ರಾಯ ಹಂಚಿಕೊಂಡರು.