ಚಿತ್ರದುರ್ಗ: ದಾರ್ಶನಿಕರನ್ನು ಅವತಾರ ಪುರುಷರಂತೆ ಬಿಂಬಿಸಿ, ದೈವತ್ವಕ್ಕೇರಿಸಿದರೆ ಅವರ ಚಲನಶೀಲತೆ ನಾಶವಾಗುತ್ತದೆ. ಸುಧಾರಕರು, ದಾರ್ಶನಿಕರು ಮಾಡಿದ ಪ್ರಯೋಗಗಳು ದೈವತ್ವದೊಂದಿಗೆ ಸಮಾಪ್ತಗೊಳ್ಳುತ್ತವೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಶ್ರಾವಣ ಮಾಸದ ಅಂಗವಾಗಿ ನಡೆಸುತ್ತಿರುವ ‘ಶ್ರಾವಣ ದರ್ಶನ’ದ 24ನೇ ದಿನದ ಫೇಸ್ಬುಕ್ ಹಾಗೂ ಯುಟ್ಯೂಬ್ ಲೈವ್ನಲ್ಲಿ ‘ಅವತಾರದ ಪರಿಕಲ್ಪನೆ ಹಾಗೂ ಸಮಕಾಲೀನ ಚಿಂತನೆ’ ಕುರಿತು ಅವರು ಮಾತನಾಡಿದರು.
‘ಕ್ರಾಂತಿಕಾರಿ ಬಸವಣ್ಣ ಕಲ್ಯಾಣ ಕಟ್ಟಿದರೇ ಹೊರತು ಅವತಾರಿ ಬಸವಣ್ಣನಲ್ಲ. ಅವತಾರ ಪುರುಷರಂತೆ ಕಂಡರೆ ದೈವತ್ವ ವಿಜೃಂಭಿಸಿ, ಶರಣತ್ವ ಮೂಲೆಗುಂಪಾಗುತ್ತದೆ. ಅವರ ಕ್ರಿಯಾಶೀಲತೆ ಗಣನೆಗೆ ಬಾರದೇ ಸೃಜನಶೀಲತೆ ನಾಶವಾಗುತ್ತದೆ’ ಎಂದು ವಿಶ್ಲೇಷಣೆ ಮಾಡಿದರು.
‘ಭಾರತೀಯರಲ್ಲಿ ಅವತಾರದ ಪರಿಕಲ್ಪನೆ ಬಲವಾಗಿದೆ. ದೇವರು ಒಬ್ಬೊಬ್ಬರ ರೂಪದಲ್ಲಿ ಜನ್ಮ ತಾಳಿ ಸಮಸ್ಯೆ ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ದಶಾವತಾರದ ಪರಿಕಲ್ಪನೆ ದೇವಲೋಕಕ್ಕೆ. ಸೀಮಿತವಾದುದು. ದೇವ, ದಾನವ, ಮಾನವ ಎನ್ನುವ ಮೂರು ಹಂತಗಳಿವೆ’ ಎಂದು ವಿವರಿಸಿದರು.
‘ಆತ್ಮದ ಇರುವಿಕೆಯನ್ನು ಒಪ್ಪಿಕೊಳ್ಳುವಲ್ಲಿ ಮರುಹುಟ್ಟು ಸಾಧ್ಯವಿದೆ. ಶರೀರಕ್ಕೆ ಸಾವಿದೆ, ಆತ್ಮಕ್ಕೆ ಸಾವಿಲ್ಲ ಎಂದು ಬಿಂಬಿಸಿಕೊಂಡು ಬರಲಾಗಿದೆ. ಜನ್ಮಾಂತರದ ಪರಿಕಲ್ಪನೆ ಎಲ್ಲ ಧರ್ಮಗಳಲ್ಲೂ ಇದೆ. ಪುನರ್ಜನ್ಮವನ್ನು ಎಲ್ಲ ಧರ್ಮೀಯರು ಒಪ್ಪುತ್ತಾರೆ. ಇದು ಒಂದು ರೀತಿಯ ಭ್ರಮಾತ್ಮಕ ಕಲ್ಪನೆ’ ಎಂದರು.