ಚಿತ್ರದುರ್ಗ: ‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ಕಾರಣಕ್ಕೂ ಸಂವಿಧಾನ ಬದಲಿಸಿ ಮೀಸಲಾತಿ ಸೌಲಭ್ಯ ತೆಗೆಯುವುದಿಲ್ಲ. ಪರಿಶಿಷ್ಟ ಜಾತಿಯವರು, ಅದರಲ್ಲೂ ದಲಿತರು ಆತಂಕಪಡುವ ಅಗತ್ಯವಿಲ್ಲ’ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಕಚೇರಿ ಬಳಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೂ ಸಂವಿಧಾನ ಅನೇಕ ಬಾರಿ ತಿದ್ದುಪಡಿಯಾಗಿದೆ. ಇದು ಕೆಲವೊಮ್ಮೆ ಅನಿವಾರ್ಯವೂ ಹೌದು. ಆದರೆ, ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದು, ಮೀಸಲಾತಿ ಸೌಲಭ್ಯ ಪಡೆಯುತ್ತಿರುವವರು ಭೀತಿಗೆ ಒಳಗಾಗುವ ಅಗತ್ಯವಿಲ್ಲ’ ಎಂದು ಪುನರುಚ್ಚರಿಸಿದರು.
‘ಬಿಜೆಪಿ ದಲಿತ ವಿರೋಧಿಯಲ್ಲ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯಲು ಶ್ರಮಿಸುತ್ತಿದೆ. ಬಲಿಷ್ಠ ಭಾರತ ನಿರ್ಮಾಣದ ಗುರಿ ಹೊಂದಿದೆ. ಪರಿಶಿಷ್ಟ ಜಾತಿಯಲ್ಲಿ ಕೇವಲ ದಲಿತರು ಮಾತ್ರ ಇಲ್ಲ. ಪಟ್ಟಿಯಲ್ಲಿ 101 ಜಾತಿ ಸೇರಿವೆ. ಅನೇಕ ಸಮಸ್ಯೆಗಳು ದಲಿತರನ್ನು ಕಾಡುತ್ತಿವೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
‘ಬಿಜೆಪಿ ಸಂವಿಧಾನ ಹಾಗೂ ದಲಿತ ವಿರೋಧಿ ಎಂಬ ಹುಳುವನ್ನು ದಲಿತರ ಕಿವಿಯೊಳಗೆ ಕೆಲವರು ಬಿಟ್ಟಿದ್ದಾರೆ. ಅದನ್ನು ಹೊರತೆಗೆಯುವ ಹೊಣೆಗಾರಿಕೆ ರಾಜ್ಯದಲ್ಲಿ ನನಗೆ ನೀಡಲಾಗಿದೆ. ನಾವು ಕೋಮುವಾದಿಗಳಲ್ಲ ಎಂಬುದನ್ನು ನನ್ನ ಸಮುದಾಯದವರಿಗೆ ತಿಳಿಸುವ ಮೂಲಕ ಪಕ್ಷದ ಜೊತೆ ಕರೆದುಕೊಂಡು ಹೋಗಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ’ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ವಿ.ಆರ್. ನಾಗರಾಜ್, ಸಂಪತ್, ಜೆ. ಶಶಿಧರ್, ನಾಗರಾಜ್ಬೇದ್ರೆ, ಭಾನುಮೂರ್ತಿ, ದೇವರಾಜ್ ನಗರಂಗೆರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.