ಚಿತ್ರದುರ್ಗ: ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಗಂಗಯ್ಯನ ಪಾಳ್ಯ ಗ್ರಾಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ರೈತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಶನಿವಾರ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ‘ಗಂಗಯ್ಯನಪಾಳ್ಯ ಗ್ರಾಮದಲ್ಲಿ 30-40 ವರ್ಷಗಳಿಂದಲೂ ರೈತರು ಬಗರ್ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಈಗ ಅರಣ್ಯ ಇಲಾಖೆಯವರು ರೈತರ ಮೇಲೆ ಹಲ್ಲೆ ನಡೆಸಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬೆಂಗಳೂರಿನ ಶಿವರಾಂ ಕಾರಂತ ಬಡಾವಣೆಯಲ್ಲಿರುವ ರೈತರ ಮೇಲೆ ಬಿ.ಡಿ.ಎ. ಅಧಿಕಾರಿಗಳ ದೌರ್ಜನ್ಯ ನಡೆಸಿ 5 ಎಕರೆ ಸಪೋಟ ತೋಟವನ್ನು ನಾಶ ಮಾಡಿದ್ದಾರೆ. ಈ ಜಾಗವನ್ನು ಶ್ರೀಮಂತರಿಗೆ, ರಾಜರಾಣಿಗಳಿಗೆ, ಅಧಿಕಾರಿಗಳಿಗೆ ಕೊಡಲು ಮುಂದಾಗಿದೆ’ ಎಂದು ದೂರಿದರು.
ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಮರೆಡ್ಡಿ, ಎಚ್.ಸದಾಶಿವಪ್ಪ, ಎನ್.ಕೆ.ರಾಜಶೇಖರಪ್ಪ, ಕೆ.ಕಲ್ಲೇಶಪ್ಪ ಇದ್ದರು.