ಮೊಳಕಾಲ್ಮುರು: ತಾಲ್ಲೂಕಿನ ದೇವಸಮುದ್ರ ಹೋಬಳಿ ಓಬಳಾಪುರ ಗ್ರಾಮದಲ್ಲಿ ಮಾರ್ಚ್ 30ರಂದು ಬಸವರಾಜ್ ಎಂಬ ಯುವಕ ಮೃತಪಟ್ಟಿದ್ದು, ಆತನ ಸಾವಿಗೆ 108 ಆಂಬುಲೆನ್ಸ್ ಸೇವೆ ವಿಳಂಬವೇ ಕಾರಣ ಎಂದು ಆರೋಪಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಅಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಸವರಾಜ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ 108 ವಾಹನಕ್ಕೆ 2 ಸಲ ಕರೆ ಮಾಡಲಾಗಿದೆ. ಆದರೆ ಸ್ಥಳಕ್ಕೆ 2 ಗಂಟೆ ತಡವಾಗಿದೆ ವಾಹನ ಬಂದಿದೆ. ಅಷ್ಟರಲ್ಲಿ ಪೋಷಕರು ಬೇರೆ ವಾಹನದಲ್ಲಿ ರಾಂಪುರ ಆಸ್ಪತ್ರೆಗೆ ಕರೆತಂದು ಪರೀಕ್ಷೆ ಮಾಡಿಸಿದಾಗ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಸಕಾಲಕ್ಕೆ ಆಂಬುಲೆನ್ಸ್ ಬಂದಿದ್ದಲ್ಲಿ ಜೀವ ಉಳಿಯುತ್ತಿತ್ತು’ ಎಂದು ದೂರಿದರು.
‘ನ್ಯಾಯಕ್ಕಾಗಿ ಆಸ್ಪತ್ರೆ ಎದುರು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಆಸ್ಪತ್ರೆ ವೈದ್ಯಾಧಿಕಾರಿ ಜಿಲ್ಲಾ ಆರೋಗ್ಯಾಧಿಕಾರಿಗೆ ನೀಡಿರುವ ವರದಿಯಲ್ಲಿ 108 ವಾಹನ ತಡವಾಗಿ ಬಂದಿದ್ದು ಸಾವಿಗೆ ಒಂದು ಕಾರಣವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆದ್ದರಿಂದ ಆಂಬುಲೆನ್ಸ್ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜತೆಗೆ ಮೃತ ಯುವಕನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.
ಪಕ್ಷದ ಮುಖಂಡರಾದ ಪಿ.ಎಂ.ಮಂಜುನಾಥ್, ಜಿಂಕಲು ಬಸವರಾಜ್, ಬಿ.ಕೃಷ್ಣಪ್ಪ, ಮಂಜುಸ್ವಾಮಿ, ನಾಗರಾಜ್, ಮೊಗಲಹಳ್ಳಿ ಸಿದ್ಧಾರ್ಥ್, ಕೆ.ತಿಪ್ಪೇಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ಇದ್ದರು.