ಹಿರಿಯೂರು: ತಾಲ್ಲೂಕಿನ ಅಂಬಲಗೆರೆ ಗ್ರಾಮದಲ್ಲಿ ಗುರುವಾರ ರಾತ್ರಿ ಗುಡುಗು, ಮಿಂಚು, ಬಿರುಗಾಳಿಯಿಂದ ಕೂಡಿದ ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಪಾಂಡುರಂಗಯ್ಯ ಎಂಬವರ ತೋಟದ 26 ಅಡಿಕೆ ಮರಗಳು, ಪೂರ್ಣಿಮಾ ಎಂಬವರಿಗೆ ಸೇರಿದ ನಾಲ್ಕು ಅಡಿಕೆ ಮತ್ತು ಎರಡು ತೆಂಗಿನ ಮರಗಳು, ರುಕ್ಕಮ್ಮ ಎಂಬವರಿಗೆ ಸೇರಿದ 75 ಬಾಳೆ ಗಿಡಗಳು, ಜಯಲಕ್ಷ್ಮಿ ಎಂಬವರ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆ ಹಾಳಾಗಿದೆ.
ಶೇಷಪ್ಪನಹಳ್ಳಿಯಲ್ಲಿ ರಂಗಮ್ಮ ಎಂಬವರು ವಾಸವಿದ್ದ ಮನೆಯ ಮೇಲೆ ಮರವೊಂದು ಬಿದ್ದು ಮನೆಗೆ ಹಾನಿಯಾಗಿದೆ. ಗೋಪಾಲಪ್ಪ ಎಂಬವರ ಮನೆಗೆ ಹೊದಿಸಿದ್ದ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಗ್ರಾಮದಲ್ಲಿ 200ಕ್ಕೂ ಹೆಚ್ಚು ಅಡಿಕೆ, 100ಕ್ಕೂ ಹೆಚ್ಚು ತೆಂಗು, ನೂರಾರು ಹುಣಿಸೆ, ಮಾವು, ಬೇವಿನ ಮರಗಳು ಮುರಿದು ಬಿದ್ದಿವೆ ಎಂದು ಗ್ರಾಮದ ಮುಖಂಡ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.
ಹಿರಿಯೂರಿನಲ್ಲಿ 20 ಮಿ.ಮೀ. ಮಳೆ: ಹಿರಿಯೂರಿನಲ್ಲಿ ಗುರುವಾರ ರಾತ್ರಿ 2 ಮಿ.ಮೀ. ಮಳೆಯಾಗಿದ್ದರೆ, ಶುಕ್ರವಾರ ಬೆಳಿಗ್ಗೆ 20 ಮಿ.ಮೀ. ಮಳೆಯಾಗಿದೆ. ಬಬ್ಬೂರಿನಲ್ಲಿ 13 ಮಿ.ಮೀ., ಸೂಗೂರಿನಲ್ಲಿ 25.4 ಮಿ.ಮೀ. ಹಾಗೂ ಈಶ್ವರಗೆರೆ ಗ್ರಾಮದಲ್ಲಿ 1.2 ಮಿ.ಮೀ. ಮಳೆಯಾಗಿದೆ.