ಮೊಳಕಾಲ್ಮುರು:ಮಂಗಳೂರಿನಿಂದ ವಿಶಾಖಪಟ್ಟಣಕ್ಕೆ ಹೋಗುತ್ತಿದ್ದ ಮೀನುಗಾರರ ಪ್ರವೇಶಕ್ಕೆ ಆಂಧ್ರಪ್ರದೇಶ ಚೆಕ್ಪೋಸ್ಟ್ ಸಿಬ್ಬಂದಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಮೀಪದ ಎದ್ದಲ ಬೊಮ್ಮಯ್ಯನಹಟ್ಟಿ ಬಳಿ ಶನಿವಾರ ಗೊಂದಲ ವಾತಾವರಣ ನಿರ್ಮಾಣವಾಗಿತ್ತು.
ಶನಿವಾರ ಬೆಳಗಿನ ಜಾವ ಎದ್ದಲ ಬೊಮ್ಮಯ್ಯನಹಟ್ಟಿ ಬಳಿಯ ಕೋವಿಡ್ ಚೆಕ್ಪೋಸ್ಟ್ನಲ್ಲಿ 100ಕ್ಕೂ ಹೆಚ್ಚು ಮೀನುಗಾರರಿದ್ದ 6 ರಾಜ್ಯ ಸಾರಿಗೆ ಸಂಸ್ಥೆ ಬಸ್ಸುಗಳನ್ನು ಅಲ್ಲಿನ ಸಿಬ್ಬಂದಿ ರಾಜ್ಯ ಪ್ರವೇಶಕ್ಕೆ ಸೂಕ್ತ ದಾಖಲಾತಿ ಇಲ್ಲ. ಜತೆಗೆ ಬಿಟ್ಟುಕೊಳ್ಳುವಂತೆ ನಮ್ಮ ಸರ್ಕಾರದಿಂದ ಸೂಚನೆಯೂ ಬಂದಿಲ್ಲ.ಆದ್ದರಿಂದ ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು.
ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಎದ್ದಲ ಬೊಮ್ಮಯ್ಯನಹಟ್ಟಿ ಜನರೂ ಮೀನುಗಾರರು ಇಲ್ಲಿ ಇರುವುದು ಬೇಡ ಎಂದು ಹೇಳಿದ ಕಾರಣ ಅವರನ್ನು ಇಲ್ಲಿನ ತಾಲ್ಲೂಕು ಕಚೇರಿ ಆವರಣಕ್ಕೆ ಕರೆ ತರಲಾಯಿತು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಬಸವರಾಜ್, ಸಿಪಿಐ ಗೋಪಾಲನಾಯ್ಕ್, ಎಸ್ಐ ಬಸವರಾಜ್ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿದರು.
ರಾಜ್ಯದಿಂದ ವಿಶಾಖಪಟ್ಟಣಕ್ಕೆ ತೆರಳಲು ನೀಡಿರುವ ಅನುಮತಿ ಪತ್ರಗಳನ್ನು ನೀಡಲಾಗಿತ್ತು. ಘಟನೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು. ನಂತರ ಎರಡು ರಾಜ್ಯಗಳ ಜಿಲ್ಲಾಧಿಕಾರಿಗಳು ಮಾಹಿತಿ ರವಾನೆ ಮಾಡಿಕೊಂಡ ನಂತರ ಮಧ್ಯಾಹ್ನ ಹೊತ್ತಿಗೆ ಕಾರ್ಮಿಕರನ್ನು ಆಂಧ್ರ ಅಧಿಕಾರಿಗಳು ಒಳಗಡೆ ಬಿಟ್ಟುಕೊಳ್ಳಲು ಒಪ್ಪಿಗೆ ನೀಡಲಾಯಿತು.
ತಹಶೀಲ್ದಾರ್ ಬಸವರಾಜ್ ಮಾಹಿತಿ ನೀಡಿ, ‘ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅನಂತಪುರ ಜಿಲ್ಲಾಧಿಕಾರಿ ಜತೆ ಘಟನೆ ಕುರಿತು ಮಾತುಕತೆ ನಡೆಸಿ ಸಮಸ್ಯೆ ತಿಳಿಗೊಲಿಸಿದರು. ಕಾರ್ಮಿಕರು ಉಡುಪಿ ಜಿಲ್ಲೆಯಿಂದ ಬಂದಿದ್ದು, ಆಂಧ್ರದ ಕಾಕಿನಾಡಕ್ಕೆ ಹೋಗುತ್ತಿದ್ದರು’ ಎಂದು ತಿಳಿಸಿದರು.