ಹಿರಿಯೂರು: ಭೂಮಿ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ನೀಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ಇದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಹೋರಾಟಗಾರ ಕಸವನಹಳ್ಳಿ ರಮೇಶ್ ಆರೋಪಿಸಿದರು.
ಕರ್ನಾಟಕ ಭೂ ಹಕ್ಕುದಾರರ ವೇದಿಕೆ ನೇತೃತ್ವದಲ್ಲಿ ಬಗರ್ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವಂತೆ ಆಗ್ರಹಿಸಿ ಯಲ್ಲದಕೆರೆ ಗ್ರಾಮದಿಂದ ಆರಂಭಿಸಿದ್ದ ಪಾದಯಾತ್ರೆಯನ್ನು ಶನಿವಾರ ತಾಲ್ಲೂಕು ಕಚೇರಿ ಬಳಿ ಸ್ವಾಗತಿಸಿ ಮಾತನಾಡಿದರು.
ಅಧಿಕಾರಿಗಳು ಮತ್ತು ರಾಜಕಾರಣಿಗಳು ಉಳ್ಳವರ ಪರವಾಗಿ ಕಾನೂನು ರೂಪಿಸಿ, ನಿಜವಾದ ಭೂಮಾಲೀಕರನ್ನು ಗೋಳಾಡಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪಾದಯಾತ್ರೆಯಂತಹ ಗಾಂಧಿ ಮಾರ್ಗದ ಹೋರಾಟದ ಹಾದಿ ಹಿಡಿಯಲಾಗಿದೆ ಎಂದರು.
ಬಿಡಿಎಸ್ ರಾಜ್ಯಾಧ್ಯಕ್ಷ ಡಾ. ಪ್ರಕಾಶ್ ಬಿರಾದಾರ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಭೂಮಿ ಹಕ್ಕುದಾರರ ಜಿಲ್ಲಾ ಸಂಚಾಲಕ ರೂಪ ನಾಯಕ ಮಾತನಾಡಿದರು.
ಬಳಿಕಉಪವಿಭಾಗಾಧಿಕಾರಿ ಪ್ರಸನ್ನ ಅವರಿಗೆ ಮನವಿ ಸಲ್ಲಿಸಲಾಯಿತು.
ಭೂ ಹಕ್ಕುದಾರರ ವೇದಿಕೆ ಅಧ್ಯಕ್ಷ ಹುಲಗಲಕುಂಟೆ ರಂಗಸ್ವಾಮಿ, ಕಾರ್ಯದರ್ಶಿ ಜಯಣ್ಣ, ದೊಡ್ಡಘಟ್ಟ ಕುಮಾರ್, ತಿಮ್ಮರಾಜ್, ಶಶಿಕಲಾ, ಲೋಕಮ್ಮ, ವಿಠ್ಠಲ, ಪಾಂಡುರಂಗ, ರಾಮಚಂದ್ರ ಕಸವನಹಳ್ಳಿ, ನರಸಿಂಹಯ್ಯ, ವಿಜಯಣ್ಣ ಇದ್ದರು.