ಹೊಸದುರ್ಗ: ತಾಲ್ಲೂಕಿನ ಶ್ರೀರಂಗಪುರದಿಂದ ಆನಿವಾಳ ಗ್ರಾಮಕ್ಕೆ ತೆರಳುವ ರಸ್ತೆ ಮಧ್ಯೆದಲ್ಲೇ ಕೊಳವೆಬಾವಿ ಇದೆ. ಇದರಿಂದ ಜನರು ತೊಂದರೆ ಎದುರಿಸುವಂತಾಗಿದೆ.
ಈಚೆಗೆ ನಿರ್ಮಿತಿ ಕೇಂದ್ರದಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಕೊಳವೆಬಾವಿಯನ್ನು ಸೇರಿಸಿ ಕಾಂಕ್ರೀಟ್ ಹಾಕಲಾಗಿದೆ. ಇದರಿಂದ ಕೊಳವೆಬಾವಿಯೂ ಉಪಯೋಗಕ್ಕೆ ಬಾರದಂತಾಗಿದೆ. ಅವೈಜ್ಞಾನಿಕ ಕಾಮಗಾರಿ ಮಾಡಿದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀರಭದ್ರೇಶ್ವರ, ಮಹಾರುದ್ರಸ್ವಾಮಿ ಹಾಗೂ ಕರಿಯಮ್ಮ ದೇವಾಲಯ ಸೇರಿದಂತೆ ಗ್ರಾಮದ ಮೂರು ಬೀದಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದು. 350 ಮನೆಗಳಿವೆ. ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಪಟ್ಟಣಕ್ಕೆ ಹೋಗುವ ಜನರು ಇದೇ ಮಾರ್ಗದಲ್ಲಿ ಸಂಚರಿಸಬೇಕು.
ರಸ್ತೆ ಮಧ್ಯೆ ಕೊಳವೆಬಾವಿ ಬಿಟ್ಟು ರಸ್ತೆಗೆ ಕಾಂಕ್ರೀಟ್ ಹಾಕಿರುವ ಕಾರಣ ಬೈಕ್ ಸವಾರರು ಪರದಾಡುವಂತಾಗಿದ್ದರೆ, ಕಾರುಗಳಲ್ಲಿ ಬರುವವರು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಮನೆಗಳಿಗೆ ತೆರಳಬೇಕಾಗಿದೆ.
ಈ ಗ್ರಾಮದಲ್ಲಿ 6 ಕೊಳವೆಬಾವಿಗಳಿವೆ. ಇನ್ನೊಂದು ಕೊಳವೆಬಾವಿಯನ್ನೂ ಇದೇರೀತಿ ರಸ್ತೆ ಮಧ್ಯೆದಲ್ಲಿ ಬಿಟ್ಟು ಕಾಂಕ್ರೀಟ್ ಹಾಕಲಾಗಿದೆ. ಈಗ ಈ ರಸ್ತೆಯೂ ಅದೇ ರೀತಿಯಾಗಿದೆ. ಇರುವ 6 ಕೊಳವೆಬಾವಿಗಳಲ್ಲಿಸಿಹಿ ನೀರು ಬರುವ ಕೊಳವೆಬಾವಿ ಇದೊಂದೆ. 15 ವರ್ಷಗಳಿಂದ ಸುತ್ತಲಿನ ಗ್ರಾಮಗಳ ಜನರು ಇದೇ ನೀರನ್ನು ಕುಡಿಯಲು ಬಳಸುತ್ತಿದ್ದರು. ಈಗ ಇದನ್ನು ಬಳಸದಂತಾಗಿದೆ.
‘ಕೊಳವೆಬಾವಿಯಲ್ಲಿ ನೀರಿದೆ. ಆದರೆ ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿ ಜನರ ಉಪಯೋಗಕ್ಕೆ ಬಾರದಂತೆ ಮಾಡಿದ್ದಾರೆ. ಈಗ ನೀರಿಗೆ ಅಲೆಯುವ ಸ್ಥಿತಿ ಎದುರಾಗಿದೆ’ ಎಂದು ಗ್ರಾಮದ ಚಂದ್ರಮ್ಮ ಹೇಳಿದರು.
‘ಕೊಳವೆಬಾವಿ ತೆರವುಗೊಳಿಸಬೇಕಿತ್ತು. ಇಲ್ಲ ಮೋಟರ್ ಅಳವಡಿಸಿ ನೀರಿನ ವ್ಯವಸ್ಥೆ ಮಾಡಬೇಕಿತ್ತು. ಯಾವುದನ್ನೂ ಮಾಡದೆ ಬೇಕಾಬಿಟ್ಟಿ ಕಾಮಗಾರಿ ಮಾಡಿದ್ದಾರೆ.ರಾತ್ರಿವೇಳೆ ವಾಹನ ಸವಾರರು ಓಡಾಡಲು ತೊಂದರೆಯಾಗಿದೆ. ಹೊರಗಿನವರು ಬಂದರೆ ಅಪಘಾತಕ್ಕೀಡಾಗುವುದು ಖಂಡಿತ. ಸುತ್ತ ಚಿಕ್ಕ ಗೋಡೆ ನಿರ್ಮಿಸಬೇಕು. ಬೀದಿ ದೀಪದ ವ್ಯವಸ್ಥೆ ಮಾಡಬೇಕು ಎಂದು ಗ್ರಾಮದ ನಿರಂಜನ, ನಾಗರಾಜ್ಒತ್ತಾಯಿಸಿದರು.
ಕೊಳವೆಬಾವಿ ಬಿಟ್ಟು 4 ಮೀ. ರಸ್ತೆ ನಿರ್ಮಿಸುವ ಉದ್ದೇಶವಿತ್ತು. ಗ್ರಾಮಸ್ಥರು ರಸ್ತೆ ವಿಸ್ತರಣೆಗೆಒತ್ತಾಯಿಸಿದ್ದರಿಂದ ಹೀಗಾಗಿದೆ. ಸದ್ಯದಲ್ಲೇ ಕೊಳವೆಬಾವಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು.
–ಕೃಷ್ಣೇಗೌಡ ಕೆ.ಎಂ., ಎಂಜಿನಿಯರ್, ನಿರ್ಮಿತಿ ಕೇಂದ್ರ
ನಿರ್ಮಿತಿ ಕೇಂದ್ರದವರು ರಸ್ತೆ ಮಾಡುವಾಗ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿಲ್ಲ. ಕೊಳವೆಬಾವಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.
–ಮಂಜುನಾಥ್ ಜೆ., ಪಿಡಿಒ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.