ಚಿತ್ರದುರ್ಗ: ‘ರಾಜ್ಯದ 58ಸಾವಿರ ಬೂತ್ಗಳಲ್ಲಿ ಜ. 26ರಂದು ಸಿಎಎ, ಎನ್ಆರ್ಸಿ ಪರವಾಗಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಬಿಜೆಪಿ ಬೂತ್ಮಟ್ಟದ ಅಧ್ಯಕ್ಷರು ಮೋದಿ ಅವರಿಗೆ ಪತ್ರ ಸಂದೇಶ ಕಳಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.
‘26ಕ್ಕೆ ಸಿಎಎ ಅಭಿಯಾನ ಮುಕ್ತಾಯವಾಗಲಿದೆ. ಅಂದು ಎಲ್ಲ ಬೂತ್ಗಳಲ್ಲೂ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿ ಇಲ್ಲಿಂದಲೇ ಮೋದಿ ಅವರನ್ನು ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಿದ್ದೇವೆ. ಹುಟ್ಟು ಬಟ್ಟೆಯಲ್ಲೇ ದೇಶಕ್ಕೆ ಬಂದವರು ಎಂಬ ಪುಸ್ತಕದ ಕುರಿತು 1ಗಂಟೆ ಚರ್ಚೆಯೂ ನಡೆಯಲಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ನಾಗರಿಕ ಪೌರತ್ವ ಕಾಯ್ದೆ ವಿಶ್ವದ ಶೇ 99ರಷ್ಟು ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಈ ಹಿಂದೆ ಗಾಂಧಿಜೀ ಅವರು ಪಾಕ್ ಸೇರಿ ಇತರೆ ರಾಷ್ಟ್ರಗಳಲ್ಲಿ ನೀವು ಜೀವಿಸಲು ಸಾಧ್ಯವಾಗದಿದ್ದರೆ, ಭಾರತಕ್ಕೆ ಬನ್ನಿ. ನಿಮ್ಮನ್ನು ದೇಶ ಸ್ವಾಗತಿಸಲಿದೆ ಎಂದು ಭಾರತೀಯರ ಕುರಿತು ಹೇಳಿದ್ದರು. ಇದನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿದೆ’ ಎಂದರು.
‘ತಿದ್ದುಪಡಿಯಲ್ಲಿ ಹೇಳಿಕೊಳ್ಳುವಂಥ ಬದಲಾವಣೆ ಆಗಿಲ್ಲ. ಈ ಮುಂಚೆ 11 ವರ್ಷ ಇದ್ದ ಮಿತಿಯನ್ನು 5ವರ್ಷಕ್ಕೆ ಇಳಿಸಲಾಗಿದೆ. ದೇಶದ ಯಾವೊಬ್ಬ ಪ್ರಜೆಗೂ ಇದರಿಂದ ತೊಂದರೆ ಆಗುವುದಿಲ್ಲ. ಪೌರತ್ವ ರದ್ದಾಗುವುದಿಲ್ಲ’ ಎಂದು ಹೇಳಿದರು.
‘ಗಾಂಧಿ, ನೆಹರು, ಇಂದಿರಾಗಾಂಧಿ, ಲಾಲ್ಬಹದ್ದೂರ್ ಶಾಸ್ತ್ರೀ, ರಾಜೀವ್ಗಾಂಧಿ, ಮನಮೋಹನ್ಸಿಂಗ್ ಕೂಡ ಒಪ್ಪಿಕೊಂಡ ಪೌರತ್ವ ತಿದ್ದುಪಡಿಯನ್ನು ಗಾಂಧಿ ಪರಿವಾರ ಎಂಬುದಾಗಿ ಹೇಳಿಕೊಳ್ಳುವಂಥ ಕಾಂಗ್ರೆಸ್, ಎಡಪಂಥೀಯ ಪಕ್ಷಗಳು ವಿರೋಧಿಸುತ್ತಿರುವುದು ವಿಪರ್ಯಾಸ. ದೇಶದ ಶೇ 90ರಷ್ಟು ಮಂದಿ ಇದರ ಪರವಾಗಿಯೇ ಇದ್ದಾರೆ’ ಎಂದು ತಿಳಿಸಿದರು.
‘ಪಾಕಿಸ್ತಾನದ 1996 ಮಂದಿ ಅಲ್ಪಸಂಖ್ಯಾತರು, ಆಫ್ಗಾನಿಸ್ತಾನದ 361 ಮಂದಿ ಸೇರಿ ಮುಸ್ಲಿಂ ರಾಷ್ಟ್ರಗಳಿಂದ ಇಲ್ಲಿಗೆ ಬಂದ ಸುಮಾರು 5ಸಾವಿರಕ್ಕೂ ಹೆಚ್ಚು ಮಂದಿಗೆ ಈ ಹಿಂದೆಯೇ ಪೌರತ್ವ ನೀಡಲಾಗಿದೆ. ಈಗ ಮತಬ್ಯಾಂಕ್ ರಾಜಕಾರಣಕ್ಕಾಗಿ ವಿರೋಧಿಸುತ್ತಿರುವವರು ರಾಷ್ಟ್ರಕ್ಕೆ ಆಘಾತ ಉಂಡು ಮಾಡುವ ದೇಶ ದ್ರೋಹಿಗಳು’ ಎಂದು ಪುನರುಚ್ಚರಿಸಿದರು.
‘ಸೋನಿಯಾಗಾಂಧಿ, ಅದ್ನಾನ್ ಸಾಮಿ, ತಸ್ಲಿಮಾ ನಸ್ರಿನ್ ಸೇರಿ ಅನೇಕರಿಗೆ ಪೌರತ್ವ ನೀಡಲಾಗಿದೆ. ಕಾಯ್ದೆ ತಿದ್ದುಪಡಿ ನಂತರ ಯಾರನ್ನಾದರೂ ದೇಶ ಬಿಟ್ಟು ಓಡಿಸಲಾಗಿದೆಯೇ’ ಎಂದು ಪ್ರಶ್ನಿಸಿದರು.
ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರುಳಿ, ಮಾಜಿ ಅಧ್ಯಕ್ಷ ಟಿ.ಜಿ. ನರೇಂದ್ರನಾಥ್, ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ಮುಖಂಡರಾದ ಸೇತುರಾಂ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.