ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿಯ ನರಸೀಪುರ ಬಳಿ ಹಿರೇಹಳ್ಳದಲ್ಲಿ ಗುರುವಾರ ಮೀನು ಹಿಡಿಯಲು ಹೋಗಿ ಕಣ್ಮರೆಯಾಗಿದ್ದ ಇಬ್ಬರು ಬಾಲಕರ ಮೃತದೇಹ ಶುಕ್ರವಾರ ಮುಂಜಾನೆ ಇಲ್ಲಿನ ಚೆಕ್ ಡ್ಯಾಂನಲ್ಲಿ ಪತ್ತೆಯಾಗಿವೆ.
ಸಮೀಪದ ದೇವಪುರ ಕಾಲೊನಿಯ ಈರಣ್ಣನ ಪುತ್ರ ಪ್ರಜ್ವಲ್ (12), ಇದೇ ಗ್ರಾಮದ ಶಂಕರಪ್ಪನ ಪುತ್ರ ಜಯಂತ್(13) ಮೃತ ಬಾಲಕರು. ಪ್ರಜ್ವಲ್ 6ನೇ ತರಗತಿ, ಜಯಂತ್ 7ನೇ ತರಗತಿ ಓದುತ್ತಿದ್ದರು.
ಅಗ್ನಿ ಶಾಮಕ ಠಾಣೆ ಸಿಬ್ಬಂದಿ, ಈಜುಗಾರರು ಹಾಗೂ ಗ್ರಾಮಸ್ಥರು ಹಳ್ಳದ ವ್ಯಾಪ್ತಿಯಲ್ಲಿ ನಿರಂತರ ಶೋಧ ಕಾರ್ಯಾಚರಣೆ ನಡೆಸಿ ಯಶಸ್ವಿಯಾದರು. ಸ್ಥಳಕ್ಕೆ ಶಾಸಕ ಗೂಳಿಹಟ್ಟಿ ಡಿ.ಶೇಖರ್, ಸರ್ಕಲ್ ಇನ್ಸ್ಪೆಕ್ಟರ್ ಫೈಜುಲ್ಲ, ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಮೃತಪಟ್ಟ ಬಾಲಕರ ಕುಟುಂಬದವರಿಗೆ ತಲಾ ₹ 1 ಲಕ್ಷ ವೈಯಕ್ತಿಕವಾಗಿ ನೆರವು ನೀಡುತ್ತೇನೆ’ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಭರವಸೆ ನೀಡಿದರು. ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.