ಭರಮಸಾಗರ: ಇಲ್ಲಿನ ಭರಮಣ್ಣನಾಯಕನ ದೊಡ್ಡಕೆರೆ ಏರಿ ಹಿಂಭಾಗದ ಕೆಳಭಾಗದಲ್ಲಿ ಒಂದನೇ ತೂಬಿನ ಬಳಿ ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿರುವುದು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು.
ಈ ಬಗ್ಗೆ ಮಾಹಿತಿ ಪಡೆದತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೂಡಲೇ ದೊಡ್ಡಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.
‘ತೂಬಿನಲ್ಲಿ ನೀರು ಸೋರಿಕಯಾಗುತ್ತಿರುವ ಸದ್ದು ಬರುತ್ತಿರುವುದನ್ನು ಖಚಿತ ಪಡಿಸಿಕೊಂಡ ಸ್ವಾಮೀಜಿ ಒಂದನೇ ತೂಬಿನಿಂದ ಹೊರಹೋಗುತ್ತಿರುವ ನೀರು ಏರಿ ಪಕ್ಕದಲ್ಲಿನಿಲ್ಲದಂತೆ ಕಾಲುವೆ ನಿರ್ಮಿಸಿ ಹಳ್ಳಸೇರುವ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸೂಚಿಸಿದರು.
‘ಏರಿ ಬಿರುಕು ದುರಸ್ತಿಗಾಗಿ ಮಣ್ಣು ತೆಗೆದಿರುವ ಕಾರಣ ನೀರಿನ ಒತ್ತಡಕ್ಕಿಂತ ಏರಿಯಲ್ಲಿನ ಮಣ್ಣಿನ ಒತ್ತಡ ಕಡಿಮೆಯಾಗಿದೆ. ಇದು ತೂಬಿನಲ್ಲಿ ನೀರು ಸೋರಿಕೆಗೆ ಕಾರಣವಾಗಿರಬಹುದು ಎಂಬುದು ತಂತ್ರಜ್ಞರ ಅನಿಸಿಕೆ.ನೀರು ಸೋರಿಕೆ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಯಾರೂ ಆತಂಕ ಪಡಬೇಕಿಲ್ಲ’ ಎಂದು ಶ್ರೀಗಳು ತಿಳಿಸಿದರು.
‘ಪ್ರತಿ ಎರಡು ಗಂಟೆಗೆ ಇಬ್ಬರಂತೆ ಸ್ಥಳೀಯ ಯುವಕರು ರಾತ್ರಿ ಪಾಳಿ ವ್ಯವಸ್ಥೆಯಲ್ಲಿ ತೂಬಿನ ಬಳಿ ಕಾವಲಿದ್ದು ನೀರಿನ ಹೊರಹರಿವಿನಲ್ಲಿ ಹೆಚ್ಚಳವಾಗುತ್ತಿದೆಯೇ ಎಂದು ಗಮನಿಸಿ ವಿಡಿಯೊ ಮಾಡಿ ನನಗೆ ತಲುಪಿಸಬೇಕು’ ಎಂದರು.
ಏರಿ ಪಕ್ಕದಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ಕೇಳಲಾಗಿದೆ ಎನ್ನುವ ವಿಷಯವನ್ನು ಗ್ರಾಮಸ್ಥರು ಸ್ವಾಮೀಜಿ ಗಮನಕ್ಕೆ ತಂದರು. ಸದ್ಯಕ್ಕೆ ಮರ ಕಡಿಯುದಂತೆ ಶ್ರೀಗಳು ಗುತ್ತಿಗೆದಾರರಿಗೆ ಸೂಚಿಸಿದರು.