ಚಿತ್ರದುರ್ಗ: ಮಹಿಳಾ ದಿನಾಚರಣೆಯ ಅಂಗವಾಗಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಮಹಿಳಾ ಹೋರಾಟಕ್ಕೆ ಸಂಬಂಧಿಸಿದ ಛಾಯಾಚಿತ್ರಗಳನ್ನು ಸೋಮವಾರ ಪ್ರದರ್ಶಿಸಿತು.
ಇಲ್ಲಿನ ಒನಕೆ ಓಬವ್ವ ವೃತ್ತದ ಬಳಿ ಇರುವ ಭಗತ್ ಸಿಂಗ್ ಉದ್ಯಾನದ ಮುಂಭಾಗದಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಮೂಲಕ ದೇಶದ ಜ್ವಲಂತ ಸಮಸ್ಯೆಗಳನ್ನು ಅನಾವರಣಗೊಳಿಸಲಾಯಿತು. ಬೆಲೆ ಏರಿಕೆ ಹಾಗೂ ಕೆಲ ಕಾನೂನುಗಳ ಬಗ್ಗೆ ಅರಿವು ಮೂಡಿಸಲಾಯಿತು.
‘ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಆದರೆ, ದೇಶದಲ್ಲಿ ಮಹಿಳೆಯರಿಗೆ ಭದ್ರತೆಯೇ ಇಲ್ಲ. ಜನಪ್ರಿಯ ಘೋಷಣೆಗಳನ್ನು ಮಾಡುವ ಸರ್ಕಾರ ಜನಪರವಾದ ಆಡಳಿತ ನೀಡುವಲ್ಲಿ ವಿಫಲವಾಗುತ್ತಿದೆ’ ಎಂದು ಎಐಎಂಎಸ್ಎಸ್ ಜಿಲ್ಲಾ ಸಂಚಾಲಕಿ ಸುಜಾತ ಅಸಮಾಧಾನ ವ್ಯಕ್ತಪಡಿಸಿದರು.
‘ಇಂಧನದ ಬೆಲೆ ಏರಿಕೆಯಾಗುತ್ತಿದೆ. ರೈಲ್ವೆ ಖಾಸಗೀಕರಣಕ್ಕೆ ಹುನ್ನಾರ ನಡೆಯುತ್ತಿದೆ. ಕಾರ್ಪೊರೇಟ್ ಕಂಪನಿಗಳ ಪರವಾದ ಕಾನೂನು ತಿದ್ದುಪಡಿ ಮಾಡಲಾಗುತ್ತಿದೆ. ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೈತರಿಗೆ ಸಂಕಷ್ಟ ತರಲಾಗಿದೆ. ದೇಶದ ಪರಿಸ್ಥಿತಿ ಗಂಭೀರವಾಗುತ್ತಿದ್ದರೂ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಎಂಎಸ್ಎಸ್ನ ಜಿಲ್ಲಾ ಸಹಸಂಚಾಲಕಿ ಕುಮುದ, ತ್ರಿವೇಣಿ ಸೇನ್, ಸದಸ್ಯರಾದ ಸಂದ್ಯಾ, ಸರಸ್ವತಿ, ರಾಣಿ ಇದ್ದರು.