ಚಳ್ಳಕೆರೆ: ಅವಧಿ ಮೀರಿದ ಔಷಧಿಗಳನ್ನು ಜಾನುವಾರುಗೆ ನೀಡುತ್ತಿರುವುದು ಸೇರಿದಂತೆ ಪಶುವೈದ್ಯರ ಕೊರತೆ ನೀಗಿಸುವಂತೆ ಒತ್ತಾಯಿಸಿ ಸೋಮವಾರ ತಾಲ್ಲೂಕಿನ ಮೀರಾಸಾಬಿಹಳ್ಳಿ ಗ್ರಾಮದ ಪಶುವೈದ್ಯ ಆಸ್ಪತ್ರೆ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಸಹಾಯಕ ಪಶು ವೈದ್ಯಾಧಿಕಾರಿ ಡಾ.ಹನುಮಪ್ಪ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಅವಧಿ ಮೀರಿ ಎರಡು ತಿಂಗಳಾಗಿದ್ದರೂ ಒಂದೇ ಮಾತ್ರೆಗಳನ್ನು ಇಲ್ಲಿನ ಜಾನುವಾರುಗೆ ನೀಡಲಾಗುತ್ತಿದೆ. ಇದರಿಂದಾಗಿ ಜಾನುವಾರುಗೆ ಕಾಯಿಲೆ
ಬಂದಿದೆ. ಅದನ್ನು ಗ್ರಾಮಸ್ಥರು ಪ್ರಶ್ನಿಸಿದಾಗ ಆಸ್ಪತ್ರೆಯಲ್ಲಿ ಇದ್ದ ಅವಧಿ ಮೀರಿದ ಔಷಧಿಗಳನ್ನು ರಾಣೀಕೆರೆ ಹಳ್ಳದಲ್ಲಿ ಹೂತು ಹಾಕಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇಲ್ಲಿನ ಆಸ್ಪತ್ರೆಗೆ ಕಾಯಂ ವೈದ್ಯರ ಸಮಸ್ಯೆ ಇದ್ದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ತಾತ್ಕಾಲಿಕವಾಗಿ ವಾರದಲ್ಲಿ ಎರಡು ದಿನ ಮಾತ್ರ ಕರ್ತವ್ಯಕ್ಕೆ ಬರುವ ವೈದ್ಯರು ಜನತೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಉನ್ನತ ವ್ಯಾಸಂಗಕ್ಕೆ ದೀರ್ಘಕಾಲದ ರಜೆಯ ಮೇಲೆ ತೆರಳಿದ್ದಾರೆ. ವಾರಕ್ಕೆ ಎರಡು ದಿನ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುವಂತೆ ಚಳ್ಳಕೆರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಸೂಚಿಸಲಾಗಿದೆ.
ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಂಪೌಂಡರ್ ಅನಾರೋಗ್ಯ ನಿಮಿತ್ತ ರಜೆಯಲ್ಲಿ ಇರುವುದರಿಂದ ಎಲ್ಲಾ ಕೆಲಸವನ್ನು ಅಟೆಂಡರ್ ಮಾಡುತ್ತಿರುವುದರಿಂದ ಈ ರೀತಿ ಆಗಿದೆ ಎಂದು ಡಾ.ಹನುಮಪ್ಪ ವಿವರಿಸಿದರು.
ಗ್ರಾಮಸ್ಥರ ಮನವೊಲಿಸಿದ ಅವರು ಆಸ್ಪತ್ರೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರವಿಕುಮಾರ್, ಓಂಕಾರಪ್ಪ, ಶೇಖರಪ್ಪ, ರಾಮೇಗೌಡ, ರಮೇಶ್, ಚಂದ್ರೇಗೌಡ, ನಾಗರಾಜ ಮತ್ತಿತರರು ಇದ್ದರು.