ಚಿತ್ರದುರ್ಗ: ಖಾಸಗಿ ಶಾಲಾ ಕಾಲೇಜುಗಳಲ್ಲಿ ಪಡೆಯುತ್ತಿರುವ ಡೊನೇಷನ್ ಹಾವಳಿ ತಡೆಗಟ್ಟಬೇಕು ಹಾಗೂ ಮನೆಪಾಠ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ನ್ಯೂ ಜೈ ಭಾರತ್ ರಕ್ಷಣಾ ವೇದಿಕೆ ಜಿಲ್ಲಾ ವಿದ್ಯಾರ್ಥಿ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯಲ್ಲಿ ಖಾಸಗಿ ಶಾಲಾ ಕಾಲೇಜುಗಳು ಸರ್ಕಾರ ನಿಗದಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಹಣ ಪಡೆಯುತ್ತಿದ್ದು, ಇದರಿಂದ ಪೋಷಕರು ಶುಲ್ಕ ಭರಿಸಲು ಪರಿತಪಿಸುವಂತಾಗಿದೆ. ಆದ್ದರಿಂದ, ಖಾಸಗಿ ಸಂಸ್ಥೆಗಳ ಸಂಸ್ಥಾಪಕ, ಕಾರ್ಯದರ್ಶಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಮನೆಪಾಠ ಮಾಡುವವರ ವಿರುದ್ಧ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಗ್ರಾಮೀಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು. ನ್ಯೂ ಜೈ ಭಾರತ್ ರಕ್ಷಣಾ ವೇದಿಕೆ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿಷೇಕ್ ಹಾಜರಿದ್ದರು.