ಹೊಸದುರ್ಗ: ಜನತೆಯ ತಲ್ಲಣಕ್ಕೆ ಮೀಸಲಾತಿ ವ್ಯವಸ್ಥೆಯೇ ಕಾರಣ ಎಂದು ಚಿತ್ರದುರ್ಗ ಮುರುಘಾರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಭಾನುವಾರ ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ತಾಲ್ಲೂಕು ಗಾಣಿಗ ಸಮಾಜ ಆಯೋಜಿಸಿದ್ದ ಗಾಣಿಗ ಸಂಘದ ದ್ವಿತೀಯ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಬುದ್ಧ, ಮಹಾವೀರ, ಯೇಸು ತಮ್ಮ ಬೋಧನೆಗಳ ಮೂಲಕ ಹಾಗೂ 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ವಚನ ಸಾಹಿತ್ಯದ ಮೂಲಕ ಸಮಾಜದ ಅಸಮಾನತೆಯನ್ನು ನಿವಾರಿಸಿ, ಎಲ್ಲಾ ಧರ್ಮ ಹಾಗೂ ಜಾತಿಯ ಜನರನ್ನು ಸಾಮಾಜಿಕ ವ್ಯವಸ್ಥೆಯ ತಕ್ಕಡಿಯಲ್ಲಿ ಸಮಾನವಾಗಿ ತೂಗಲು ಪ್ರಯತ್ನಿಸಿದರು ಎಂದರು.
21ನೇ ಶತಮಾನದಲ್ಲಿ ಜನರು ಸಮಸ್ಯೆಯ ಸವಾಲನ್ನು ಎದುರಿಸುತ್ತಿದ್ದಾರೆ. ಎಲ್ಲಾ ಸಮುದಾಯಗಳಲ್ಲಿಯೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಟಗಳು ನಡೆಯುತ್ತಿವೆ. ಸಮಾಜದಲ್ಲಿ ಅತೀ ಹಿಂದುಳಿದ ಬಡವರ ಸಾಮಾಜಿಕ ಸುಧಾರಣೆಗೆ, ಸಂವಿಧಾನ ಮೀಸಲಾತಿ ವ್ಯವಸ್ಥೆ ಕಲ್ಪಿಸಿದೆ. ಆದರೆ, ಇಂದಿಗೂ ಕಡು ಬಡತನದಲ್ಲಿ ಬದುಕುತ್ತಿರುವ ಅನೇಕ ಸಮಾಜಗಳಿಗೆ ಮೀಸಲಾತಿ ಸೌಲಭ್ಯ ಸರಿಯಾಗಿ ಸಿಗತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಶಾಸಕ ಬಿ.ಜಿ.ಗೋವಿಂದಪ್ಪ ಉದ್ಘಾಟಿಸಿ ಮಾತನಾಡಿದರು. ದಾವಣಗೆರೆ ಗಾಣಿಗ ಸಂಸ್ಥಾನದ ಬಸವಕುಮಾರ ಸ್ವಾಮೀಜಿ ಹಾಗೂ ವಿಜಾಪುರದ ವನಶ್ರೀ ಸಂಸ್ಥಾನದ ಜಯದೇವ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು.
ತಾಲ್ಲೂಕು ಗಾಣಿಗ ಸಂಘದ ಅಧ್ಯಕ್ಷ ಕೆ.ಸಿ.ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ಎಸ್. ಮುರುಗೇಶ್, ಡಾ.ಸಜ್ಜನ್, ಮಂಜುನಾಥ್ ಹಾಗೂ ಸಮಾಜದ ಮುಖಂಡರು ಇದ್ದರು.