ಚಿಕ್ಕಜಾಜೂರು: ‘ಎಲ್ಲೆಡೆ ಸ್ವಾತಂತ್ರ್ಯದ ಹಕ್ಕುಗಳು ಹರಣವಾಗುತ್ತಿದ್ದು, ಅಲ್ಲಿನ ಸರ್ಕಾರಗಳ ವಿರುದ್ಧ ಹಲವು ಸಂಘಟನೆಗಳು, ವ್ಯಕ್ತಿಗಳು ಹೋರಾಟ ನಡೆಸುತ್ತಿದ್ದಾರೆ. ಇವರೆಲ್ಲರ ಹೋರಾಟಕ್ಕೆ ಸ್ಫೂರ್ತಿ ಮಹಾತ್ಮ ಗಾಂಧಿ’ ಎಂದು ಹಿರಿಯ ಶಿಕ್ಷಕ ಡಿಕ್ಕಿ ಮಾಧವರಾವ್ ತಿಳಿಸಿದರು.
ಜನತಾ ಕಾಲೊನಿಯ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಸತ್ಯಾಗ್ರಹ ನಡೆಸಿ, ಕಪ್ಪು ಜನಾಂಗಕ್ಕೆ ನ್ಯಾಯ ದೊರಕಿಸಿಕೊಟ್ಟರು. ನಂತರ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಆಗಿದ್ದರು ಎಂದು ತಿಳಿಸಿದರು.
ದೇಶದ ಎರಡನೇ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಜನರ ಹಸಿವನ್ನು ನೀಗಿಸಲು, ಹಸಿರು ಕ್ರಾಂತಿಯನ್ನೇ ಹುಟ್ಟು ಹಾಕಿದ್ದರು. ಕೃಷಿ ಪ್ರಧಾನ ರಾಷ್ಟ್ರ ನಿರ್ಮಾಣಕ್ಕೆ ದಾರಿ ದೀಪವಾದರು ಎಂದು ಶಿಕ್ಷಕ ಗುರುಸ್ವಾಮಿ ತಿಳಿಸಿದರು.
ಎಸ್ಡಿಎಂಸಿ ಅಧ್ಯಕ್ಷೆ ಲತಾ, ಸದಸ್ಯೆ ಪಾರ್ವತಮ್ಮ, ಮುಖ್ಯ ಶಿಕ್ಷಕಿ ಗಂಗಮ್ಮ, ಶಿಕ್ಷಕ ವರ್ಗ ಇದ್ದರು.