ಚಿಕ್ಕಜಾಜೂರು: ಹೆಜ್ಜೇನಿಗಿಂತಲೂ ಅಪಾಯಕಾರಿಯಾದ ರಾಮಗುಂಗೆ ಮನುಷ್ಯರಿಗೆ ಅಥವಾ ಜಾನುವಾರುಗಳಿಗೆ ಕಚ್ಚಿದರೆ ತಕ್ಷಣ ವಿಷ ಏರುತ್ತದೆಂದೂ, ಅವುಗಳ ದಾಳಿಗೆ ಬದುಕಿ ಉಳಿದವರು ಕಡಿಮೆ ಎಂದು ಹೇಳಲಾಗಿದೆ.
ಸಮೀಪದ ಬಿ. ದುರ್ಗ ಗ್ರಾಮದ ಕಣ ಒಂದಲ್ಲಿರುವ ಹುಣಸೆ ಮರದಲ್ಲಿ ಇಂತಹುದೊಂದು ಬೃಹತ್ತಾದ ರಾಮಗುಂಗೆ ಗೂಡು ಇಲ್ಲಿನ ಜನರಲ್ಲಿ ಭೀತಿಯನ್ನುಂಟುಮಾಡಿದೆ. ಕೆಲವರ ಪ್ರಕಾರ ಒಂದು ರಾಮಗುಂಗೆ ಕಚ್ಚಿದರೆ 10 ಹೆಜ್ಜೇನು ಕಚ್ಚಿದ್ದಕ್ಕೆ ಸಮವಂತೆ. ಇಂತಹ ಸಾವಿರಾರು ರಾಮಗುಂಗೆಗಳು ಒಟ್ಟಾಗಿ ನೆಲ ಮಟ್ಟದಿಂದ ಸುಮಾರು 20-25 ಅಡಿ ಎತ್ತರದಲ್ಲಿ ಹುಣಸೆ ಮರದ ಕೊಂಬೆಯೊಂದರಲ್ಲಿ ಕಟ್ಟಿರುವ ಈ ಗೂಡು ಸುಮಾರು ಎರಡುವರೆಯಿಂದ ಮೂರು ಅಡಿ ಎತ್ತರವಿದ್ದು, ಸುಮಾರು ಆರು ಅಡಿಗೂ ಹೆಚ್ಚು ಸುತ್ತಳತೆಯನ್ನು ಹೊಂದಿದೆ. ಅಡಿಕೆ ಸಿಪ್ಪೆಯ ನಾರು ಹಾಗೂ ಮೆಕ್ಕೆಜೋಳದ ರವದಿಯಿಂದ ಅತ್ಯಂತ ಬಿಗಿಯಾಗಿ ಗೂಡನ್ನು ನಿರ್ಮಿಸಿಕೊಂಡಿರುವ ರೀತಿಯನ್ನು ನೋಡಿದರೆ ಮನುಷ್ಯರೂ ನಾಚುವಂತೆ ಇದೆ.
ಆದರೂ, ಈ ಗುಂಗೆ ಊರ ಸಮೀಪದಲ್ಲಿ, ಅದರಲ್ಲೂ ರಸ್ತೆ ಪಕ್ಕದಲ್ಲಿರುವುದು ತುಂಬಾ ಅಪಾಯಕಾರಿ. ಇದನ್ನು, ಕಂಡ ಗ್ರಾಮದ ಕೆಲ ಯುವಕರು ಗೂಡನ್ನು ಸುಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇಲ್ಲದಿದ್ದರೆ, ಈ ಗುಂಗೆಗಳಿಂದ ಅಪಾಯ ತಪ್ಪಿದ್ದಲ್ಲ ಎಂಬುದು ಗ್ರಾಮಸ್ಥರ ಒಮ್ಮತದ ಅಭಿಪ್ರಾಯವಾಗಿದೆ.