ನಾಯಕನಹಟ್ಟಿ: ಶೇಂಗಾ ಬೆಳೆಯ ದರವು ಕುಸಿದಿರುವುದನ್ನು ಖಂಡಿಸಿ ನ.27ರಂದು ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.
ಪಟ್ಟಣದ ತೇರು ಬೀದಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಚಳ್ಳಕೆರೆ ತಾಲ್ಲೂಕಿನಲ್ಲಿ ನಿರಂತರವಾಗಿ ಬರಗಾಲವಿದೆ. ಅಲ್ಪಸ್ವಲ್ಪ ಮಳೆಯಿಂದ ರೈತರು ಶೇಂಗಾ ಬೆಳೆಯುತ್ತಾರೆ. ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ₹ 6,500ರಿಂದ ₹ 7,000ಕ್ಕೆ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಬೆಳೆಯ ಆರೈಕೆ ಮಾಡಲೂ ಸಾಲ ಮಾಡಿದ್ದಾರೆ. ಹಲವು ಸಂಕಷ್ಟಗಳ ಮಧ್ಯೆ ಇದೀಗ ಬೆಳೆಯು ರೈತರ ಕೈಸೇರಿದೆ. ಆದರೆ, ಧಿಡೀರ್ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹುರಾಷ್ಟ್ರೀಯ ಕಂಪೆನಿಗಳು ತಯಾರಿಸಿದ ವಸ್ತುಗಳನ್ನು ಅವರೇ ದರ ನಿಗದಿಪಡಿಸಿ ಮಾರಾಟ ಮಾಡುತ್ತಾರೆ. ಆದರೆ, ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ದಲ್ಲಾಳಿಗಳು ಮತ್ತು ಸರ್ಕಾರ ಹರಾಜು ಮಾಡುವ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಸರ್ಕಾರವು ರೈತರ ಶೋಷಣೆ ಮಾಡುತ್ತಿದೆ ಎಂದು ದೂರಿದರು.
ರೈತಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಗಾಳಪ್ಪನವರ ತಿಮ್ಮಣ್ಣ, ಅಧ್ಯಕ್ಷ ಕೆ.ಸಿ.ಶ್ರೀಕಂಠಮೂರ್ತಿ, ಪ್ರಧಾನ ಕಾರ್ಯದರ್ಶಿ ಉಪ್ಪಾರಹಟ್ಟಿ ಡಿ.ಈರಣ್ಣ, ಕಾರ್ಯಾಧ್ಯಕ್ಷ ತಳಕು ನಾಗರಾಜ, ಉಪಾಧ್ಯಕ್ಷರಾದ ಡಿ.ರಾಜಣ್ಣ, ವರವು ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿ ವಡೇರಹಳ್ಳಿ ಬಸವರಾಜ ಇದ್ದರು.