ಹೊಸನಗರ: ಜನ ಸಂಗ್ರಾಮ ಪರಿಷತ್ತುವತಿಯಿಂದ ಜನಬದುಕಿನ ಸಮಾವೇಶ ತಾಲ್ಲೂಕಿನ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಂಬೆಕೊಪ್ಪದಲ್ಲಿ ಜ.12 ಹಾಗೂ 13ರಂದು ನಡೆಯಲಿದೆ ಎಂದು ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವಾಮದೇವ ಗೌಡ ತಿಳಿಸಿದರು.
ಪರಿಸರ, ರೈತರ, ಯುವ ಸಮುದಾಯ ಸಮಸ್ಯೆ, ಪರಿಹಾರ ಕುರಿತ 2 ದಿನಗಳ ಸಮಾವೇಶವನ್ನು ಸಾಮಾಜಿಕ ಪರಿವರ್ತನಾ ಸಂಸ್ಥೆಯ ಸಂಸ್ಥಾಪಕ ಎಸ್.ಆರ್. ಹಿರೇಮಠ ಉದ್ಘಾಟಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಜನಪರ ಹೋರಾಟಗಾರ ರಾಘವೇಂದ್ರ ಕುಷ್ಟಗಿ, ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಜಾನ್ ವೆಸ್ಲಿ, ಸಾಹಿತಿ ಡಾ.ಸರ್ಜಾ ಶಂಕರ ಹರಳಿಮಠ ಪಾಲ್ಗೊಳ್ಳುವರು ಎಂದರು.
ಸಾಮಾಜಿಕ ಹೋರಾಗಾರ ರಾಜಪ್ಪ ಮಾಸ್ತರ್ ಅಧ್ಯಕ್ಷತೆಯಲ್ಲಿ ನಡೆಯುವ ಮೊದಲ ಗೋಷ್ಠಿಯಲ್ಲಿ ‘ಡಾ. ಕಸ್ತೂರಿರಂಗನ್ ವರದಿಯ ಸಾಧಕ– ಭಾದಕಗಳ’ ಬಗ್ಗೆ ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಗಡೆ ಮಂಡನೆಗೆ ಚಿಂತಕ ಕುರುವರಿ ಸೀತಾರಾಮ್ ಪ್ರತಿಕ್ರಿಯೆ ನೀಡುವರು.
ಮಧ್ಯಾಹ್ನ ಮಲ್ಲಿಕಾರ್ಜುನ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಯುವ ‘ಮಲೆನಾಡಿನಲ್ಲಿ ಗಣಿಗಾರಿಕೆಯ ಅಪಾಯ’ ಕುರಿತು ಅಖಿಲೇಶ ಚಿಪ್ಳಿ ಅವರ ವಿಚಾರ ಮಂಡನೆಗೆ ಪರಿಸರ ಹೋರಾಟಗಾರ ಹೊಸಮನೆ ಗಿರೀಶ ಆಚಾರಿ ಪ್ರತಿಕ್ರಿಯೆ ನೀಡುವರು.
ಸಮಾವೇಶದ 2ನೇ ದಿನ ಡಿ.13ರಂದು 3 ಗೋಷ್ಠಿಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಶಿವಾನಂದ ಕುಗ್ವೆ ಅಧ್ಯಕ್ಷೆಯಲ್ಲಿ ನಡೆಯುವ ಮೊದಲ ಗೋಷ್ಠಿಯಲ್ಲಿ ‘ನಿರುದ್ಯೋಗ ಸಮಸ್ಯೆಯ ವಿವಿಧ ಮುಖಗಳು’ ಬಗ್ಗೆ ರವಿಕೃಷ್ಣಾ ರೆಡ್ಡಿ ಅವರು ಮಂಡಿಸುವ ವಿಚಾರ ಮಂಡನೆಗೆ ದೀಪಕ್ ಪ್ರತಿಕ್ರಿಯೆ ನೀಡುವರು.
ಬಗರ್ ಹುಕುಂ ಸಾಲ, ರೈತರ ಸಮಸ್ಯೆ ಕುರಿತ ಗೋಷ್ಠಿಯಲ್ಲಿ ರೈತ ಹೋರಾಟಗಾರ ಕೆ.ಟಿ.ಗಂಗಾಧರ ವಿಚಾರ ಮಂಡನೆಗೆ ನಮ್ಮ ಹಕ್ಕು ವೇದಿಕೆಯ ಕೆ.ಪಿ.ಶ್ರೀಪಾಲ್ ಪ್ರಕ್ರಿಯೆ ನೀಡುವರು. ಜಯಲಕ್ಷ್ಮಿ ಗಂಗಾಧರ್ ಅಧ್ಯಕ್ಷತೆ ವಹಿಸಿವರು.
‘ಡಾ.ಮಾಧವ ಗಾಡ್ಗೀಳ್ ವರದಿಯ ಸಾಧಕ– ಬಾಧಕಗಳು’ ಕುರಿತು ಸಿ.ಯತಿರಾಜ್ ಮಂಡನೆಗೆ ಕೆ.ಜಿ.ಶ್ರೀಧರ ಪ್ರತಿಕ್ರಿಯೆ ನೀಡುವರು. ಎನ್.ಕೆ. ಮಂಜುನಾಥ ಗೌಡ ಅಧ್ಯಕ್ಷತೆ ವಹಿಸುವರು. ಗೋಷ್ಠಿಯ ಸಮನ್ವಯರಕರಾಗಿ ಕಬಸೆ ಅಶೋಕ ಮೂರ್ತಿ, ಪರಮೇಶ್ವರ ದೂಗೂರು, ಡಿ.ಎಸ್. ಶಂಕರ್, ಎಸ್. ರಾಘವೇಂದ್ರ ಹಾಗೂ ಪ್ರತಿಮಾ ಪಾಲ್ಗೊಳ್ಳುವರು ಎಂದು ತಿಳಿಸಿದರು.
ವಿಶ್ವಸಂಸ್ಥೆಯ ಕೃಷಿ ಸಲಹೆಗಾರ ಡಾ.ಎ.ಎನ್.ನಾಗರಾಜ ಸಮಾರೋಪ ಭಾಷಣ ಮಾಡುವರು. ಶಂಕರ ಶರ್ಮ ಅಧ್ಯಕ್ಷತೆಯಲ್ಲಿ ಎಚ್.ಸಿ. ಗುರುಪಾದಪ್ಪ, ಟಿ.ಆರ್. ಕೃಷ್ಣಪ್ಪ, ವಿರೂಪಾಕ್ಷಪ್ಪ, ಐಗಿನಬೈಲು ರಮೇಶ ಭಾಗವಹಿಸುವರು ಎಂದರು.
ಸುದ್ದಿಗೊಷ್ಠಿಯಲ್ಲಿ ಸ್ವರಾಜ್ ಅಭಿಯಾನದ ಸಂಚಾಲಕ ಶಿವಾನಂದ ಕುಗ್ವೆ, ಜನ ಸಂಗ್ರಾಮ ಪರಿಷತ್ತಿನ ಪದಾಧಿಕಾರಿಗಳಾದ ಗಿರೀಶ ಆಚಾರಿ, ಜಯಲಕ್ಷ್ಮಿ ಗಂಗಾಧರ, ಧನ್ಯಕುಮಾರ, ಆನಂದ್, ಶೈಲಜಾ ಗೌಡ, ಕೆ.ಟಿ. ರಮೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.